ಮುಂಬೈ: ಮಿನಿ ಬಸ್ವೊಂದು ಕೊಲ್ಹಾಪುರ ಜಿಲ್ಲೆಯ ಪಂಚಗಂಗಾ ನದಿಗೆ ಉರುಳಿ 13 ಮಂದಿ ಮೃತಪಟ್ಟಿದ್ದಾರೆ.
ಶುಕ್ರವಾರ ರಾತ್ರಿ ಅಪಘಾತ ಸಂಭವಿಸಿದೆ. ಮಿನಿ ಬಸ್ನಲ್ಲಿ 17 ಮಂದಿ ಇದ್ದರು. ಇವರೆಲ್ಲರೂ ಪುಣೆಯ ಬಾಲೇವಾಡಿಯವರು. ವಾಹನದಲ್ಲಿ ಮೂರು ಕುಟುಂಬಗಳ ಸದಸ್ಯರಿದ್ದರು. ಬಾಲೇವಾಡಿಯಿಂದ ಗಣಪತಿಪುಲೆಗೆ ಪ್ರವಾಸಕ್ಕೆ ತೆರಳಿದ್ದ ಇವರು ಹಿಂತಿರುಗುತ್ತಿರುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರಲ್ಲಿ ಮೂವರು ಪುರುಷರು, ಮೂವರು ಮಹಿಳೆಯರು ಹಾಗೂ ಏಳು ಮಕ್ಕಳು ಸೇರಿದ್ದಾರೆ. ಪಂಚಗಂಗಾ ನದಿಯ ಶಿವಾಜಿ ಸೇತುವೆ ಮೇಲೆ ವೇಗವಾಗಿ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣಕ್ಕೆ ಸಿಗದೆ ನದಿಗೆ ಉರುಳಿದೆ ಎಂದು ಅವರು ತಿಳಿಸಿದ್ದಾರೆ.
ಅಪಘಾತದ ಮಾಹಿತಿ ದೊರೆತ ನಂತರ ಅಗ್ನಿ ಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿ ಮತ್ತು ಪೊಲೀಸರು ನದಿಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದರು. 13 ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.