ಮುಜಫ್ಪರನಗರ : ವಿವಾದಿತ ‘ಪದ್ಮಾವತ್’ ಸಿನಿಮಾ ಪ್ರದರ್ಶನವಾಗುತ್ತಿದ್ದ ಚಿತ್ರಮಂದಿರದೊಳಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಸಂಜೆ ಚಂದ್ರ ಟಾಕೀಸ್ನಲ್ಲಿ ಪದ್ಮಾವತಿ ಸಿನಿಮಾ ಪ್ರದರ್ಶನ ನಡೆಯುತ್ತಿದ್ದಾಗ ಈ ಕೃತ್ಯ ಎಸಗಲಾಗಿದೆ ಎಂದು ವೃತ್ತ ನಿರೀಕ್ಷಕ ಹರೀಶ್ ಭಧೋರಿಯಾ ಹೇಳಿದ್ದಾರೆ.
ಆರೋಪಿಗಳ ಗುರುತು ಪತ್ತೆಯಾಗಿಲ್ಲ. ಬೈಕಿನಲ್ಲಿ ಬಂದಿದ್ದ ವ್ಯಕ್ತಿಗಳು ಪೆಟ್ರೋಲ್ ಬಾಂಬ್ ಎಸೆದು ಚಿತ್ರಮಂದಿರವನ್ನು ಸುಡುವ ಪ್ರಯತ್ನ ಮಾಡಿದ್ದಾರೆ. ಹೆಚ್ಚಿನ ಹಾನಿಯಾಗಿರುವ ಬಗ್ಗೆ ಚಿತ್ರಮಂದಿರದ ಮಾಲೀಕರು ವರದಿ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ಪದ್ಮಾವತ್ ಸಿನಿಮಾ ಪ್ರದರ್ಶನ ಕಾಣುತ್ತಿರುವ ಮೂರೂ ಚಿತ್ರಮಂದಿರಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.
ಗಳಿಕೆ: ಚಿತ್ರವು ಮೊದಲ ದಿನ ₹ 19 ಕೋಟಿ ಗಳಿಸಿತ್ತು. ಶನಿವಾರ 27ರಂದು ಈ ಗಳಿಕೆ ₹ 83 ಕೋಟಿಗೆ ಏರಿದ್ದು ವಾರಾಂತ್ಯದೊಳಗೆ ಇದು ₹ 100 ಕೋಟಿ ತಲುಪುವ ವಿಶ್ವಾಸವಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.
ಈ ಚಿತ್ರ ಬಿಡುಗಡೆ ಮುನ್ನ ವ್ಯಾಪಕ ಪ್ರತಿಭಟನೆಗಳು ನಡೆದರೂ ಬಿಡುಗಡೆ ಬಳಿಕ ಯಾವುದೇ ವ್ಯತಿರಿಕ್ತ ಪರಿಣಾಮಗಳು ಕಂಡು ಬಂದಿಲ್ಲ ಎಂದಿದ್ದಾರೆ.