ತಿರುವನಂತಪುರ: 555 ಅಡಿ ಎತ್ತರ ಹಾಗೂ 650 ಅಡಿ ಅಗಲ ಹೊಂದಿರುವ ಕಮಾನು ಆಕೃತಿಯ ಇಡುಕ್ಕಿ ಅಣೆಕಟ್ಟಿನ ಗೋಡೆಯ ಮೇಲೆ ರಾಜ್ಯದ ಪ್ರಮುಖ ಘಟನಾವಳಿಯನ್ನು ಲೇಸರ್ ಮೂಲಕ ಪ್ರದರ್ಶಿಸಲು ಕೇರಳ ಸರ್ಕಾರ ಸಿದ್ಧತೆ ನಡೆಸಿದೆ.
‘ಅತ್ಯಂತ ಭವ್ಯವಾದ ಇಡುಕ್ಕಿ ಅಣೆಕಟ್ಟು ವಿಶ್ವದಲ್ಲೇ ಎರಡನೇ ಅತೀ ದೊಡ್ಡದಾಗಿದ್ದು, ಯೋಜನೆ ಸಾಕಾರಗೊಂಡರೆ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲಿದೆ. ಅಲ್ಲದೇ ಅಣೆಕಟ್ಟಿನ ಮೇಲ್ಮೈನ ಲೇಸರ್ ಪ್ರದರ್ಶನವನ್ನು 26 ಕಿ.ಮೀ. ದೂರದಿಂದಲೂ ಜನರು ವೀಕ್ಷಿಸಬಹುದಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಕೇರಳ ವಿದ್ಯುತ್ ನಿಗಮವು ವಿಸ್ತೃತಾ ಯೋಜನಾ ವರದಿಯನ್ನು ತಯಾರಿಸಿ, ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿದೆ. ₹26 ಕೋಟಿ ಮೊತ್ತದ ಈ ಯೋಜನೆಗೆ ಹಣ ಬಿಡುಗಡೆಯಾದ ಬಳಿಕ ಕಾಮಗಾರಿ ಆರಂಭಿಸಲಾಗುವುದು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
‘ದಿನಕ್ಕೆ 30 ನಿಮಿಷದ ಮೂರು ಪ್ರದರ್ಶನವಿರಲಿದ್ದು, 200ರಿಂದ 300 ಮಂದಿ ವೀಕ್ಷಣೆ ಮಾಡಬಹುದು. ಅಲ್ಲದೇ, ಅಣೆಕಟ್ಟಿನ ಕೆಳಭಾಗದಲ್ಲಿ ವರ್ತುಲ ನಾಟಕಶಾಲೆ, ಶಾಪಿಂಗ್ ಕಾಂಪ್ಲೆಕ್ಸ್, ಅಕ್ವೇರಿಯಂ ನಿರ್ಮಾಣ ಮಾಡಲಾಗುತ್ತದೆ’ ಎಂದು ತಿಳಿಸಿದರು.
‘ಕುರವನ್’ ಹಾಗೂ ‘ಕುರತ್ತಿ’ ಬೆಟ್ಟಗಳ ಮಧ್ಯೆ ಪೆರಿಯಾರ್ ನದಿಗೆ ಈ ಅಣೆಕಟ್ಟು ನಿರ್ಮಿಸಲಾಗಿದೆ. 1976ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಈ ಅಣೆಕಟ್ಟನ್ನು ಉದ್ಘಾಟಿಸಿದ್ದರು.