ಮೈಸೂರು: ಅರಮನೆ ಆವರಣದಲ್ಲಿ ಮೈಸೂರು ಯೋಗ ಒಕ್ಕೂಟದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರ ಹಾಗೂ ಸೂರ್ಯ ಯಜ್ಞ ಸಮಾರಂಭಕ್ಕೆ ಭರಪೂರ ಸ್ಪಂದನೆ ವ್ಯಕ್ತವಾಯಿತು.
ಬೆಳಗಿನ ಕುಳಿರ್ಗಾಳಿ ತೀಡುತ್ತಿದ್ದಂತೆ ಅರಮನೆಯ ಆವರಣದಲ್ಲಿ ಯೋಗಪಟುಗಳು ಸೇರತೊಡಗಿದರು. ಮೋಡಗಳ ನಡುವೆ ಸೂರ್ಯ ಕಣ್ಣು ಬಿಡುತ್ತಿದ್ದಂತೆ ಸೂರ್ಯ ನಮಸ್ಕಾರದ ವಿವಿಧ ಆಸನಗಳನ್ನು 500ಕ್ಕೂ ಹೆಚ್ಚಿನ ಯೋಗಪಟುಗಳು ಪ್ರದರ್ಶಿಸತೊಡಗಿದರು.
ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ನಗರದ ವಿವಿಧ ಯೋಗಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.
ದಿನವೂ ಸೂರ್ಯನಮಸ್ಕಾರ ಮಾಡುವುದರಿಂದ ಬಹುತೇಕ ಕಾಯಿಲೆಗಳನ್ನು ದೂರ ಮಾಡಬಹುದು. ಇದರಿಂದ ವೈದ್ಯಕೀಯ ಕಾಲೇಜಿಗೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಟಾಕಿ ಹಾರಿಸಿದರು.
ಯೋಗಾನರಸಿಂಹಸ್ವಾಮಿ ದೇಗುಲದ ಸಂಸ್ಥಾಪಕ ಪ್ರೊ.ಭಾಷ್ಯಂ ಸ್ವಾಮೀಜಿ ಯೋಗದ ಮಹತ್ವ ಕುರಿತು ಮಾತನಾಡಿದರು. ಯೋಗಪಟುಗಳಿಗೆ ಕಲ್ಲುಸಕ್ಕರೆ, ಬೆಲ್ಲ ಹಾಗೂ ಉಪಾಹಾರ ವಿತರಿಸಲಾಯಿತು.