ಶಿವಮೊಗ್ಗ: ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುವಂತಾಗಬೇಕು ಎಂದು ಎಪಿಎಂಸಿ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್ ಹೇಳಿದರು. ತೋಟಗಾರಿಕೆ ಇಲಾಖೆ ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ 58ನೇ ಫಲಪುಷ್ಪ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾಗರಿಕರು ಚೌಕಾಸಿ ಮಾಡದೆ, ರೈತರ ಬಳೆಗಳನ್ನು ಕೊಂಡುಕೊಳ್ಳಬೇಕು. ಅವರ ಬೆಳೆಗಳಿಗೆ ನಿಗದಿತ ಬೆಲೆ ದೊರಕುವಂತಾಗಬೇಕು ಅಂದಾಗ ಮಾತ್ರ ಅವರ ಶ್ರಮಕ್ಕೆ ಪ್ರತಿಫಲ ದೊರೆಯುತ್ತದೆ. ಇಂತಹ ಪ್ರದರ್ಶನಗಳಲ್ಲಿ ರೈತರು ಪಾಲ್ಗೊಂಡಾಗ ರೈತರಿಗೆ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ಹಾಪ್ಕಾಮ್ಸ್ ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ, ‘ರಾಸಾಯನಿಕ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಿ, ನೈಸರ್ಗಿಕ ವಸ್ತುಗಳನ್ನು ಹೆಚ್ಚು ಬಳಕೆ ಮಾಡಬೇಕು. ಇದರಿಂದ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ’ ಎಂದರು.
ಜಿಲ್ಲಾ ಪಂಚಾಯ್ತಿ ಸಿಇಒ ರಾಕೇಶ್ ಕುಮಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಯೋಗೀಶ್, ಪಾಲಿಕೆ ಸದಸ್ಯ ಯಡಿಯಲ್ ಗೋಪಿ, ಅರಳರಣ್ಣೆ ಸಿದ್ದಪ್ಪ, ಭೂಕಾಂತ್ ಉಪಸ್ಥಿತರಿದ್ದರು.