ಚಿತ್ರದುರ್ಗ: ‘ಅಲ್ಪಸಂಖ್ಯಾತರಾಗಲಿ, ಯಾವುದೇ ಧರ್ಮೀಯರಾಗಲಿ ಅವರ ವಿರುದ್ಧದ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು ಸರಿಯಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಎಚ್.ಟಿ. ಸಾಂಗ್ಲಿಯಾನ ಹೇಳಿದರು.
‘ಪಕ್ಷದೊಳಗಿದ್ದು, ಅದು ತೆಗೆದು ಕೊಳ್ಳುವ ನಿರ್ಧಾರದ ವಿರುದ್ಧ ಮುಖಂಡನಾಗಿ ಮಾತನಾಡಲಾರೆ. ಇದು ರಾಜಕೀಯ ಉದ್ದೇಶ ದಿಂದಲೋ ಅಥವಾ ಇತರೆ ಯಾವುದೋ ಕಾರಣದಿಂದ ತೆಗೆದು ಕೊಂಡ ನಿರ್ಧಾರವೋ’ ಎಂದು ನನಗೆ ಮಾಹಿತಿ ಇಲ್ಲ’ ಎಂದರು.
ಕ್ರಿಮಿನಲ್ ಪ್ರಕರಣದ ಆರೋಪಿಗಳು ಖುಲಾಸೆಯಾಗುವ ಸಾಧ್ಯತೆ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ‘ಎಲ್ಲ ಧರ್ಮಗಳಲ್ಲೂ ತಪ್ಪು ಮಾಡಿರುವ ಆರೋಪಿಗಳಿದ್ದಾರೆ. ಒಂದು ಧರ್ಮಕ್ಕಷ್ಟೇ ಸೀಮಿತ ವಾದುದಲ್ಲ. ಆದರೆ, ತಪ್ಪು ಮಾಡಿದವರು ಕಾನೂನಿನ ಪ್ರಕಾರ ಜೈಲುಶಿಕ್ಷೆ ಅನುಭವಿಸಲೇಬೇಕು’ ಎಂದರು.
ದೇಶ ಹಾಗೂ ರಾಜ್ಯದೊಳಗೆ ನಡೆದ ದುಷ್ಕೃತ್ಯಗಳಲ್ಲಿ ಭಾಗಿಯಾದ ಯಾವುದೇ ವ್ಯಕ್ತಿಯಾಗಿರಲಿ, ಆತನ ಮೇಲಿನ ಆರೋಪದ ಕುರಿತು ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಬೇಕು. ನಿರಪರಾಧಿ ಆಗಿದ್ದಲ್ಲಿ ಬಿಡುಗಡೆಯಾಗುವಂತೆ ಮಾಡಬೇಕಾದ್ದು ಪೊಲೀಸರ ಕರ್ತವ್ಯ ಎಂದು ಸಾಂಗ್ಲಿಯಾನ ಹೇಳಿದರು.