ಕೌಲಾಲಂಪುರ: ಇಸ್ಲಾಂ ಧರ್ಮದ ಸೂಕ್ಷ್ಮ ವಿಚಾರಗಳನ್ನು ಚಿತ್ರಿಸಿರುವ ಕಾರಣ ನೀಡಿ ಮಲೇಷ್ಯಾದ ಚಲನಚಿತ್ರ ಸೆನ್ಸಾರ್ ಮಂಡಳಿ(ಎಲ್ಪಿಎಫ್) ‘ಪದ್ಮಾವತ್’ ಚಿತ್ರವನ್ನು ನಿಷೇಧಿಸಿದೆ.
‘ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಮಲೇಷ್ಯಾದಲ್ಲಿ ಈ ಚಿತ್ರ ಪ್ರದರ್ಶಿಸುವುದು ಸೂಕ್ತವಲ್ಲ ಎಂದು ಮಂಡಳಿಯ ಮುಖ್ಯಸ್ಥ ಮೊಹ್ದ್ ಜಂಬೆರಿ ಅಬ್ದುಲ್ ಅಜೀಜ್ ಅಭಿಪ್ರಾಯಪಟ್ಟಿದ್ದಾರೆ’ ಎಂದು ‘ಫ್ರೀ ಮಲೇಷ್ಯಾ ಟುಡೆ’ ವರದಿ ಮಾಡಿದೆ.
ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಸಿನಿಮಾ ವಿತರಕರು ಚಲನಚಿತ್ರ ಮೇಲ್ಮನವಿ ಸಮಿತಿಗೆ ಅರ್ಜಿ ಸಲ್ಲಿಸಿದ್ದು, ಜ.30 ವಿಚಾರಣೆ ನಡೆಯಲಿದೆ.
ಖಲಿಬಲಿ ಹಾಡು ಬಿಡುಗಡೆ:
ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣವೀರ್ ಸಿಂಗ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಿನಿಮಾದಲ್ಲಿ ಖಿಲ್ಜಿ ಗೆಲುವಿನ ಸಂಭ್ರಮದಲ್ಲಿ ಹಾಡುವ ‘ಖಲಿಬಲಿ’ ಗೀತೆ ಯುಟ್ಯೂಬ್ನಲ್ಲಿ ಬಿಡುಗಡೆಯಾಗಿದೆ.
ಈಗಾಗಲೇ ₹100 ಕೋಟಿ ಗಳಿಕೆ ಮಾಡಿರುವ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರ, ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಪ್ರಚಾರ ಕಾರ್ಯ ಮುಂದುವರಿಸಿದೆ.
ಬಿಡುಗಡೆಯಾದ ದಿನವೇ ಖಲಿಬಲಿ ಹಾಡನ್ನು 4.6 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.