ಪಣಜಿ (ಪಿಟಿಐ): ಮಹದಾಯಿಯ ಉಪನದಿಗಳ ನೀರನ್ನು (ಕಳಸಾ ಮತ್ತು ಬಂಡೂರಿ) ಕರ್ನಾಟಕವು ಮಲಪ್ರಭಾ ನದಿಗೆ ತಿರುಗಿಸುವ ಯತ್ನ ನಡೆಸುತ್ತಿದೆ ಎಂದು ಆರೋಪಿಸಿ, ಮುಂದಿನ ಬಜೆಟ್ ಅಧಿವೇಶನದಲ್ಲಿ ರಾಜ್ಯದ ವಿರುದ್ಧ ನಿರ್ಣಯ ಮಂಡಿಸಲು ಗೋವಾದ ಉಪಸ್ಪೀಕರ್ ನಿರ್ಧರಿಸಿದ್ದಾರೆ.
ಸ್ಪೀಕರ್ ಪ್ರಮೋದ್ ಸಾವಂತ್ ಹಾಗೂ ಇಬ್ಬರು ಶಾಸಕರ ಜತೆಗೆ ಕರ್ನಾಟಕದ ಕಣಕುಂಬಿಗೆ ಭೇಟಿ ನೀಡಿದ ಮರುದಿನ ಉಪಸ್ಪೀಕರ್ ಮೈಕೆಲ್ ಲೋಬೊ ಈ ಹೇಳಿಕೆ ನೀಡಿದ್ದಾರೆ.
‘ಕಣಕುಂಬಿಯಲ್ಲಿ ಕಾಲುವೆ ನಿರ್ಮಿಸುವ ಮೂಲಕ ಕರ್ನಾಟಕ ಸರ್ಕಾರವು ಮಹದಾಯಿ ಉಪನದಿಗಳ ನೀರನ್ನು ತಿರುಗಿಸುವ ಕೆಲಸ ಮಾಡುತ್ತಿದೆ. ಇದರಿಂದ ಗೋವಾಕ್ಕೆ ಜಿನುಗಿದಂತೆ ನೀರು ಹರಿಯುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.
‘ಪಕ್ಷದ ನಾಯಕರ ಜತೆಗೆ ಚರ್ಚೆ ನಡೆಸಿ, ಮುಂದಿನ ಅಧಿವೇಶನದಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ನಿರ್ಣಯ ಮಂಡಿಸಲಾಗುವುದು’ ಎಂದು ಅವರು ತಿಳಿಸಿದರು.
ಮಹದಾಯಿ ನದಿನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ–ಗೋವಾ ಹಾಗೂ ಮಹಾರಾಷ್ಟ್ರದ ನಡುವೆ ವಿವಾದವಿದೆ. ಆದರೆ ಕಣಕುಂಬಿಯಲ್ಲಿ ಕರ್ನಾಟಕವು ಯೋಜನೆ ಕೈಗೆತ್ತಿಕೊಂಡಿದ್ದು, ಇದಕ್ಕೆ ಗೋವಾ ವಿರೋಧ ವ್ಯಕ್ತಪಡಿಸಿದೆ.