ತುಮಕೂರು: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಸೋಮವಾರ ರಾತ್ರಿ ನಗರದ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ ಮಠಾಧೀಶರಾದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದರು.
ದೊಡ್ಡಬಳ್ಳಾಪುರದಿಂದ ನೇರವಾಗಿ ಮಠಕ್ಕೆ ಬಂದ ಹಜಾರೆ ಅವರು, ಹಳೇ ಮಠದಲ್ಲಿರುವ ಸ್ವಾಮೀಜಿ ಅವರ ವಿಶ್ರಾಂತಿ ಕೊಠಡಿಗೆ ತೆರಳಿದರು.
‘ಅನಾರೋಗ್ಯದಿಂದ ತಾವು ಚಿಕಿತ್ಸೆ ಪಡೆಯುತ್ತಿರುವುದು ತಿಳಿಯಿತು. ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆಯಲು ಬಂದಿದ್ದೇನೆ’ ಎಂದು ಹೇಳಿದರು.
‘ಸ್ವಾಮೀಜಿ ಜೀವನ ದೀಪ ಇದ್ದಂತೆ. ಸದಾ ಪ್ರಜ್ವಲಿಸುತ್ತಲೇ ಇರುತ್ತದೆ. ಇಂತಹ ಮಹಾ ಪುರುಷರನ್ನು ನೋಡಿ ಬಹಳ ಸಂತೋಷವಾಯಿತು. ಮಾನವನ ಸೇವೆಯೇ ಮಾಧವನ ಸೇವೆ ಇದ್ದಂತೆ. ಅದರಂತೆ ಬಡವರ ಏಳಿಗೆಗೆ ಕೆಲಸ ಮಾಡುತ್ತಿರುವ ಸ್ವಾಮೀಜಿ ಅವರಿಂದ ಇಡಿ ಜಗತ್ತಿಗೆ ಒಳಿತಾಗುತ್ತಿದೆ’ ಎಂದು ತಿಳಿಸಿದರು.