ದೇವದುರ್ಗ: ದೇವದುರ್ಗ ವಿಧಾನಸಭೆ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲು ಕಂಡಿದ್ದು, ಈ ಬಾರಿ ಗೆಲವು ಅನ್ನು ಕಾರ್ಯಕರ್ತರು ಮತ್ತು ಮುಖಂಡರು ಸವಾಲಾಗಿ ಸ್ವೀಕರಿಸಿಬೇಕು ಎಂದು ದೇವದುರ್ಗ ಮತ ಕ್ಷೇತ್ರದ ಚುನಾವಣಾ ಉಸ್ತುವಾರಿ ಅಬ್ದುಲ್ ಅಲೀಮ್ ಹೇಳಿದರು.
ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ದೇವದುರ್ಗ ಬ್ಲಾಕ್ ಮತ್ತು ಅರಕೇರಾ ಬ್ಲಾಕ್ ವತಿಯಿಂದ ಏರ್ಪಡಿಸಲಾಗಿದ್ದ ಬೂತ್ ಮಟ್ಟದ ಸಮಿತಿ ಅಧ್ಯಕ್ಷರ, ಏಜೆಂಟರ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರತಿ ಕ್ಷೇತ್ರದಲ್ಲಿ ಮೂರು ಪ್ರಕಾರ ಮತದಾರರು ಇರುತ್ತಾರೆ. ಅವರ ಪೈಕಿ ಒಬ್ಬರು ಪಕ್ಷಕ್ಕೆ ನಿಷ್ಠೆ, ಪಕ್ಷಕ್ಕೆ ವಿರೋಧಿ ಮತ್ತು ಇನ್ನೊಬ್ಬರು ಯಾವುದು ಇಲ್ಲದೆ ರಾಜಕೀಯ ನಂಟು ಇಲ್ಲದೆ ದೂರ ಇರುವವರು. ಇಂಥವರ ಬಗ್ಗೆ ಬೂತ್ ಮಟ್ಟದ ಅಧ್ಯಕ್ಷರು ಮತ್ತು ಏಜೆಂಟರು ತಮ್ಮ ಗ್ರಾಮ ಮತ್ತು ವಾರ್ಡ್ಗಳಲ್ಲಿ ಪ್ರತಿನಿತ್ಯ ಗಮನಿಸಬೇಕು. ಪಕ್ಷದ ವಿರುದ್ಧ ಕೆಲಸ ಮಾಡುವವರ ಬಗ್ಗೆ ಗಮನ ಹರಿಸಬೇಕು’ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಇರಬಗೇರಾ ಮಾತನಾಡಿ, ‘ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲವಿನ ದೊಡ್ಡ ಜವಾಬ್ದಾರಿ ಇದೆ. ವಿರೋಧಿಗಳ ತಂತ್ರಗಳಿಗೆ ಪ್ರತಿತಂತ್ರ ರೂಪಿಸಿ. ದೇವದುರ್ಗ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ರಾಜಶೇಖರ್ ನಾಯಕ ಅವರನ್ನು ಗೆಲ್ಲಿಸಿ’ ಎಂದರು.
‘ಉಪ ಚುನಾವಣೆಯಲ್ಲಿ ಹಲವು ಕಾರಣಗಳಿಂದ ಸೋಲಿಗೆ ಕಾರಣವಾಗಿದೆ. ನನ್ನ ತಂದೆ ದಿ.ವೆಂಕಟೇಶ ನಾಯಕ ಅವರು ತಾಲ್ಲೂಕಿನಲ್ಲಿ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಿ ಕೆಲವರನ್ನು ಗಡಿಪಾರು ಮಾಡಿರುವುದು ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿ ಸ್ಪರ್ಧಿಸಿರುವುದು ಗೆಲುವು ನಮ್ಮಗೆ ತಂದುಕೊಡಲಿದೆ’ ಎಂದು ರಾಜಶೇಖರ ನಾಯಕ ಹೇಳಿದರು.
ಎಪಿಎಂಸಿ ಅಧ್ಯಕ್ಷ ಅಮರೇಗೌಡ ಹಂಚಿನಾಳ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ನಿರ್ಮಲಾ ಬೆಣ್ಣಿ, ಪಕ್ಷದ ಅಧ್ಯಕ್ಷರಾದ ಆದನಗೌಡ ಬುಂಕಲದೊಡ್ಡಿ, ಭೀಮನಗೌಡ ನಾಗಡದಿನ್ನಿ, ಮಹಿಳಾ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷೆ ಬಸವರಾಜೇಶ್ವರಿ ಚನ್ನಬಸವ, ಯುವ ಕಾಂಗ್ರೆಸ್ ಅಧ್ಯಕ್ಷ ಭಾಶಾ ಕವಾಸ್, ಮುಖಂಡರಾದ ಅಮರೇಶ ಬಲ್ಲಿದವ್, ಬೂತಪ್ಪ ಹೇರುಂಡಿ, ಬಸವರಾಜ ಪಂಪಾಪತಿ, ನಾಗರಾಜ ಪಾಟೀಲ ಗೌರಂಪೇಟೆ, ಇಕ್ಬಾಲ್ಸಾಬ ಹೌದೊಡ್ಡಿ, ಮಹಾದೇವಗೌಡ ಚಿಕ್ಕಬೂದೂರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.