ಸವದತ್ತಿ: ‘ಕ್ಷೇತ್ರದಲ್ಲಿ ನಾನು ಮಾಡಿದ ಸಮಾಜಮುಖಿ ಕಾರ್ಯಗಳನ್ನು ಗಮನಿಸಿದ ಮುಖ್ಯಮಂತ್ರಿ ಹಾಗೂ ಜಾರಕಿಹೊಳಿ ಸಹೋದರರು, ವರಿಷ್ಠರು ಪಕ್ಷದ ಟಿಕೆಟ್ ಕೊಡುವ ಭರವಸೆ ನೀಡಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಆನಂದ ಚೋಪ್ರಾ ತಿಳಿಸಿದರು.
ತಾಲ್ಲೂಕಿನ ಹಿರೇಉಳ್ಳಿಗೇರಿ ಗ್ರಾಮದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ಸಂಗೀತ ಸಮಾರಂಭದಲ್ಲಿ ಪದವೀಧರರಿಗೆ ಲ್ಯಾಪ್ಟಾಪ್ ವಿತರಿಸಿ, ಸ್ವಾತಂತ್ರ್ಯ ಯೋಧರನ್ನು ಸನ್ಮಾನಿಸಿ ಮಾತನಾಡಿದರು.
‘ಅನ್ನ ಕೊಡುವ ರೈತ ನಮ್ಮೆಲ್ಲರ ಉಸಿರು. ದೇಶ ಕಾಯುವ ಸೈನಿಕರು ನಮ್ಮ ಬೆನ್ನೆಲುಬಾಗಿದ್ದಾರೆ. ಅವರನ್ನು ಗೌರವಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ’ ಎಂದರು.
‘ನನಗೆ ಅವಕಾಶ ಕೊಟ್ಟಲ್ಲಿ, ಕ್ಷೇತ್ರದಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜು ಸ್ಥಾಪಿಸುತ್ತೇನೆ. ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ಬೇರೆಡೆಗೆ ಹೋಗುವ ಪ್ರಮೇಯ ಇಲ್ಲದಂತೆ ಮಾಡುತ್ತೇನೆ. ಬಡವರಿಗೆ ಆರ್ಸಿಸಿ ಮನೆಗಳನ್ನು ಕಟ್ಟಿಸಿಕೊಡುತ್ತೇನೆ’ ಎಂದು ಭರವಸೆ ನೀಡಿದರು.
‘ತಾಲ್ಲೂಕಿನ 79 ಗ್ರಾಮಗಳಲ್ಲಿ ಮಠ, ಮಂದಿರ, ಮಸೀದಿ ಜೀರ್ಣೋದ್ಧಾರಕ್ಕೆ ಸಹಕರಿಸಿದ್ದೇನೆ. ವಧು–ವರರಿಗೆ ಅಗತ್ಯ ಸಾಮಗ್ರಿಗಳನ್ನು ಕೊಡಿಸಿದ್ದೇನೆ. ಸ್ವಂತ ಹಣದಲ್ಲಿ ಸಮಾಜಸೇವೆ ಮಾಡುತ್ತಿದ್ದೇನೆ. ಸೇವಾ ಕಾರ್ಯಗಳನ್ನು ಟೀಕಿಸುವವರಿಗೆ ಚುನಾವಣೆಯಲ್ಲಿ ಪಾಠ ಕಲಿಸಿ’ ಎಂದು ಕೋರಿದರು.
‘ಸತತ ಬರಗಾಲದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಕೃಷಿಗೆ ನೀರಿನ ಅಗತ್ಯವಿದೆ. ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಯುವಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ರೈತರು ಮಾಡಿರುವ ಸಾಲ ಮಾಡಿ, ದಿಟ್ಟತನ ಪ್ರದರ್ಶಿಸಬೇಕು’ ಎಂದು ಒತ್ತಾಯಿಸಿದರು. ಪದವೀಧರರಾದ ಭಾರತಿ ಏಗನಗೌಡ ಹಾಗೂ ಮಂಜುಳಾ ಹಡಪದ ಅವರಿಗೆ ಉಚಿತವಾಗಿ ಲ್ಯಾಪ್ಟಾಪ್ ವಿತರಿಸಿದರು.
ತಾಲ್ಲೂಕು ಪಂಚಾಯ್ತಿ ಸದಸ್ಯ ವೀರಭದ್ರ ಪಟ್ಟಣಶೆಟ್ಟಿ, ಪುರಸಭೆ ಸದಸ್ಯ ಚಂದ್ರಣ್ಣ ಶಾಮರಾಯನವರ, ಮುಖಂಡರಾದ ಬಸವರಾಜ ಪ್ರಭುನವರ, ರುದ್ರಯ್ಯ ಹೊಸಮಠ, ಉಮೇಶ ಗೊರವನಕಳ್ಳ, ಮಹಾಬಳೇಶ್ವರ ಬೆಟಸೂರ, ಚಂದ್ರಶೇಖರ ಕಡಗದ, ಕರೆಪ್ಪ ಮಾದರ ಇದ್ದರು.