ರಾಣೆಬೆನ್ನೂರು (ಹಾವೇರಿ ಜಿಲ್ಲೆ): ಕುಂದಾಪುರ ಕ್ಷೇತ್ರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಂಗಳವಾರ ಸಂಜೆ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರನ್ನು ಇಲ್ಲಿ ಭೇಟಿ ಮಾಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
‘ನನ್ನ ಎದುರಿಗೆ ಬಂದು ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ್ದಾರೆ. ಸ್ವ ಇಚ್ಛೆಯಿಂದ ರಾಜೀನಾಮೆ ಕೊಟ್ಟಿರುವುದಾಗಿ ಅವರು ತಿಳಿಸಿದ್ದಾರೆ. ಹೀಗಾಗಿ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದೇನೆ’ ಎಂದು ಕೋಳಿವಾಡ ಸುದ್ದಿಗಾರರಿಗೆ ತಿಳಿಸಿದರು.
ಬಳಿಕ ಮಾತನಾಡಿದ ಶ್ರೀನಿವಾಸ ಶೆಟ್ಟಿ ಅವರು ನಿಸ್ವಾರ್ಥದಿಂದ ಬಿಜೆಪಿ ಸೇರುವುದಾಗಿ ಘೋಷಿಸಿದರು. ‘ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ರಾಜ್ಯ ನಾಯಕರ ಬಗ್ಗೆ ಅತ್ಯಂತ ಗೌರವ ಇದೆ. ನನ್ನ ಮೇಲೆ ಬಿಜೆಪಿಯ ಬಹಳಷ್ಟು ಋಣ ಕೂಡ ಇದೆ. ಕ್ಷೇತ್ರದ ಜನರ ಇಚ್ಛೆ ಕೂಡ ನಾನು ಬಿಜೆಪಿ ಸೇರುವುದೇ ಆಗಿದೆ’ ಎಂದು ಅವರು ಹೇಳಿದರು.
‘ಮುಂದಿನ ಚುನಾವಣೆಯಲ್ಲಿ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ’ ಎಂದರು. ಮೂರು ಬಾರಿ ಬಿಜೆಪಿಯಿಂದ ಹಾಗೂ ಒಮ್ಮೆ ಪಕ್ಷೇತರರಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದರು.