ತುಮಕೂರು: ‘ಗಾಂಧಿ ಬೇಕು, ಅವರ ಮೌಲ್ಯಗಳು ಬೇಕು ಎನ್ನುತ್ತೀರಿ. ಆದರೆ ಭಗವದ್ಗೀತೆ, ರಾಮನ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದಾಗ ಗಾಂಧೀವಾದಿಗಳು ಮೌನವಾಗುವುದೇಕೆ’ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಪ್ರಶ್ನಿಸಿದರು.
ನಗರದಲ್ಲಿ ನಡೆದ ಸರ್ವೋದಯ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗಾಂಧಿ ಬೇಕು, ಅವರ ಮೌಲ್ಯಗಳು ಬೇಕು ಎನ್ನುತ್ತೀರಿ. ಆದರೆ ಗೀತೆ ಮತ್ತು ರಾಮನ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದಾಗ ಮೌನವಾಗಿ ಇರುತ್ತೀರಿ. ಲಾಭಕ್ಕೆ ಗಾಂಧಿ ತತ್ವವನ್ನು ಬಳಸುತ್ತೀರಿ ಎನಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ಗಾಂಧಿ ಅವರ ಸರ್ವೋದಯ ತತ್ವಕ್ಕೆ ಪ್ರೇರಣೆ ಭಗವದ್ಗೀತೆ. ರಾಮ ಮತ್ತು ಗೀತೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವವರನ್ನು ನಾನು ಚರ್ಚೆಗೆ ಕರೆದೆ. ಆದರೆ ಅವರು ಬರಲು ಸಿದ್ಧರಿಲ್ಲ’ ಎಂದರು.