ಬೆಂಗಳೂರು: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಶಿಫಾರಸುಗಳ ಪರಾಮರ್ಶೆ ನಡೆಸಿ, ಪರಿಶಿಷ್ಟರ ಮೀಸಲಾತಿ ಕುರಿತು ಇರುವ ಗೊಂದಲಗಳನ್ನು ರಾಜ್ಯ ಸರ್ಕಾರ ತಕ್ಷಣ ಪರಿಹರಿಸಬೇಕು ಎಂದು ಬಿಜೆಪಿ ವಕ್ತಾರ ಅಶ್ವತ್ಥ್ ನಾರಾಯಣ ಅವರು ಆಗ್ರಹಿಸಿದ್ದಾರೆ.
ಆಯೋಗದ ವರದಿಯಲ್ಲಿರುವ ಹಲವು ವಿಷಯಗಳಲ್ಲಿ ಅಸ್ಪಷ್ಟತೆಗಳಿವೆ. 2011ರ ಜನಗಣತಿ ಮತ್ತು ಆಯೋಗದ ಜನಗಣತಿ ನಡುವೆ ಲೋಪದೋಷಗಳಿರುವುದು ಗಮನಕ್ಕೆ ಬಂದಿದೆ. ಈ ಲೋಪಗಳನ್ನು ಸರಿಪಡಿಸಿ ಪರಿಶಿಷ್ಟ ಸಮುದಾಯದವರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವಿವಿಧ ಸಮುದಾಯದವರ ಅಹವಾಲು ಆಲಿಸಿ, ಸಮಗ್ರ ಚರ್ಚೆಯ ಬಳಿಕ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿರುವ ಅವರು, ಆಯೋಗದ ವರದಿಗೆ ಪಕ್ಷದ ರಾಜ್ಯ ಮುಖಂಡರು ಪರ ಅಥವಾ ವಿರೋಧ ವ್ಯಕ್ತಪಡಿಸಿಲ್ಲ ಎಂದೂ ಸ್ಪಷ್ಟಪಡಿಸಿದರು.