ಬೆಂಗಳೂರು: ‘ದೇಶದಲ್ಲಿರುವ 62 ಕೃಷಿಸಂಬಂಧಿತ ವಿಶ್ವವಿದ್ಯಾಲಯಗಳಿಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಕ್ರೀಡೆಗಳಿಗಾಗಿ ವಾರ್ಷಿಕ ₹12 ಕೋಟಿ ಅನುದಾನ ಬಿಡುಗಡೆ ಮಾಡುತ್ತಿದೆ’ ಎಂದು ಪರಿಷತ್ನ ಸಹಾಯಕ ಮಹಾ ನಿರ್ದೇಶಕ ಡಾ.ಪಿ.ಎಸ್.ಪಾಂಡೆ ಹೇಳಿದರು.
ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿರುವ 18ನೇ ಅಖಿಲಭಾರತ ಕೃಷಿ ವಿಶ್ವವಿದ್ಯಾಲಯಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತಮಾಡಿದರು.
ದೇಶದ ವಿವಿಧ ರಾಜ್ಯಗಳಿಂದ ಬಂದಿರುವ ಕ್ರೀಡಾಪಟುಗಳು ಒಂದೆಡೆ ಸೇರಿರುವುದರಿಂದ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ವಿನಿಮಯವೂ ಇಲ್ಲಿ ಸಾಧ್ಯವಾಗುತ್ತದೆ ಎಂದರು.
ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಸುಕೇಶ್ ಹೆಗ್ಡೆ, ‘ಗ್ರಾ ಮೀಣ ಕ್ರೀಡೆಯಾಗಿದ್ದ ಕಬಡ್ಡಿ, ಇತ್ತೀಚಿನ ದಿನಗಳಲ್ಲಿ ಪ್ರೊ ಕಬಡ್ಡಿ ಹೆಸರಿನಿಂದ ದೊಡ್ಡ ನಗರಗಳಲ್ಲೂ ಜನಪ್ರಿಯತೆ ಗಳಿಸುತ್ತಿದೆ. ಕ್ರಿಕೆಟ್ ನಂತರ ವಿಶ್ವದ ಅತಿದೊಡ್ಡ ಕ್ರೀಡೆಯಾಗಿ ಹೆಸರು ಮಾಡುತ್ತಿದೆ ಎಂದು ತಿಳಿಸಿದರು.
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಶಿವಣ್ಣ, ‘15 ವರ್ಷಗಳ ನಂತರ ಇಂತಹ ಕ್ರೀಡಾಕೂಟ ನಡೆಯುತ್ತಿದೆ. ಐದು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟದಲ್ಲಿ ದೇಶದ ವಿವಿಧ ರಾಜ್ಯಗಳ ಕೃಷಿಗೆ ಸಂಬಂಧಿಸಿದ ವಿಶ್ವವಿದ್ಯಾಲಯಗಳ ಕ್ರಿಡಾಪಟುಗಳು ಪಾಲ್ಗೊಂಡಿದ್ದಾರೆ’ ಎಂದು ವಿವರಿಸಿದರು.
ಪುರುಷರು ಹಾಗೂ ಮಹಿಳೆಯರ ವಿಭಾಗಗಳಲ್ಲಿ ಕಬಡ್ಡಿ, ಬ್ಯಾಡ್ಮಿಂಟನ್, ವಾಲಿವಾಲ್, ಖೋಖೋ, ಬಾಸ್ಕೆಟ್ಬಾಲ್, ಟೇಬಲ್ಟೆನ್ನಿಸ್ ಪಂದ್ಯಗಳು ನಡೆಯಲಿವೆ. ಅಲ್ಲದೆ ಅಥ್ಲೆಟಿಕ್ಸ್ನಲ್ಲಿ 100, 200, 400, 800 ಮತ್ತು 1500 ಮೀಟರ್ ಪಂದ್ಯಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.