ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 2 ಲಕ್ಷ ದೇಣಿಗೆ ನೀಡಿ ಪಕ್ಷದ ಅಭ್ಯರ್ಥಿಯಾಗಿ: ಅನುಪಮಾ ಶೆಣೈ

Last Updated 31 ಜನವರಿ 2018, 8:36 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಭಾರತೀಯ ಜನಶಕ್ತಿ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗುವವರು ಸಮಾನ ಮನಸ್ಕರಿಂದ ₹2 ಲಕ್ಷ ಸಂಗ್ರಹಿಸಿ ಪಕ್ಷಕ್ಕೆ ದೇಣಿಗೆಯಾಗಿ ಕೊಡಬೇಕು. ಶಾಸಕರಾದ ನಂತರ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಅನುದಾನ ಬಿಡುಗಡೆ ತಡವಾದರೆ, ದೇಣಿಗೆ ಎತ್ತಿಯಾದರೂ ಜನರ ಬೇಡಿಕೆ ಈಡೇರಿಸಲು ಅಭ್ಯರ್ಥಿಗೆ ಸಾಧ್ಯವಾಗಲಿದೆಯೇ ಎಂಬುದನ್ನು ಈ ಮೂಲಕ ಪರೀಕ್ಷಿಸಲಾಗುವುದು’ ಎಂದು  ಎಂದು ಭಾರತೀಯ ಜನಶಕ್ತಿ ಕಾಂಗ್ರೆಸ್‌ನ ಸ್ಥಾಪಕಿ ಅನುಪಮಾ ಶೆಣೈ ಹೇಳಿದರು. 

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಖಾಕಿಗಳ ಕೆಲಸದಲ್ಲಿ ಖಾದಿಯ ಹಸ್ತಕ್ಷೇಪ ಹೆಚ್ಚಳವಾಗಿದೆ. ಇಲಾಖೆಯಲ್ಲಿ ಬರೀ ರಾಜಕೀಯವೇ ಹಾಸುಹೊಕ್ಕಾಗಿದೆ. ನನಗೂ ಬೆದರಿಕೆ ಎದುರಾಗಿತ್ತು. ಆಗ ಎದೆಗುಂದಿದ್ದರೆ ಕಲ್ಲಪ್ಪ ಹಂಡಿಭಾಗ, ಎಂ.ಕೆ. ಗಣಪತಿ ರೀತಿ ನಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಆದರೆ ನನ್ನಲ್ಲಿನ ಛಲ, ಧೈರ್ಯದ ಕಾರಣ ಬದುಕಿ ಉಳಿದಿದ್ದೇನೆ’ ಎಂದು ಹೇಳಿದರು.

ಇದೇ ವೇಳೆ ರಾಜ್ಯದ 224 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ವಿವಿಧ ಕ್ಷೇತ್ರದ ಪರಿಣತರನ್ನು ಪರಿಗಣಿಸಲಾಗುವುದು ಎಂದು ಹೇಳಿದರು.

‘ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ನಂತರ ರಾಜ್ಯದ ಅಧಿಕಾರಿಗಳ ಮನದಲ್ಲಿ ಭಯ (ಫೋಬಿಯಾ) ಹಾಸು ಹೊಕ್ಕಾಗಿದೆ. ಬೆದರಿಕೆಯ ಕಾರಣ, ಅಧಿಕಾರಿಗಳು ಅನಿವಾರ್ಯವಾಗಿ ರಾಜಕಾರಣಿಗಳಿಗೆ ಹಣ ಸಂಗ್ರಹಿಸಿಕೊಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಭಾರತೀಯ ಜನಶಕ್ತಿ ಕಾಂಗ್ರೆಸ್‌ನ ಸ್ಥಾಪಕಿ ಅನುಪಮಾ ಶೆಣೈ ಆರೋಪಿಸಿದರು.

‘ಭಾರತೀಯ ಪೊಲೀಸ್‌ ಸೇವೆ, ಕರ್ನಾಟಕ ರಾಜ್ಯ ಪೊಲೀಸ್‌ ಸೇವೆಗೆ ಸೇರುವಾಗ ದೇಶದ ಸಂವಿಧಾನಕ್ಕೆ ನಿಷ್ಠರಾಗಿರುವುದಾಗಿ ಪ್ರಮಾಣ ಮಾಡುತ್ತಾರೆ. ಅದನ್ನು ಬದಲಾಯಿಸಲಿ. ಅಧಿಕಾರದಲ್ಲಿರುವ ಪಕ್ಷ, ರಾಜಕಾರಣಿಗಳಿಗೆ ನಿಷ್ಠರಾಗಿರುವುದಾಗಿ ಪ್ರಮಾಣ ವಚನ ಸ್ವೀಕರಿಸಲಿ’ ಎಂದು ವ್ಯಂಗ್ಯವಾಡಿದ ಶೆಣೈ, ಈ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಭಾರತೀಯ ಜನಶಕ್ತಿ ಕಾಂಗ್ರೆಸ್‌ ಸ್ಥಾಪಿಸಿ ರಾಜಕೀಯ ಪ್ರವೇಶ ಮಾಡಿದ್ದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT