ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಡ್ಜರ್ಲೆಂಡ್‌ನಲ್ಲಿ ರೇಷ್ಮೆ ಉತ್ಪಾದನೆ

Last Updated 31 ಜನವರಿ 2018, 9:40 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಭಾರತದ ಕೇಂದ್ರೀಯ ರೇಷ್ಮೆ ಮಂಡಳಿಯ ಸಹಕಾರದೊಂದಿಗೆ ರೇಷ್ಮೆಯ ವಿವಿಧ ಹಂತಗಳ ಅಧ್ಯಯನ ಕೈಗೊಂಡಿರುವುದಾಗಿ ಸ್ವಿಡ್ಜರ್ಲೆಂಡ್‌ನ ಜಾನುವಾರುಗಳ ಅಭಿವೃದ್ಧಿ ಸಂಸ್ಥೆಯ ಸಲಹೆಗಾರ ಫ್ರಿಟ್ಜ್‌ ಶ್ನೀಡರ್‌ ತಿಳಿಸಿದರು.

ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್‌.ಕೆ.ಸುರೇಶ್‌ ಅವರ ಚಾಕಿ ಕೇಂದ್ರಕ್ಕೆ ಮಂಗಳವಾರ ತಮ್ಮ ತಂಡದೊಡನೆ ಭೇಟಿ ನೀಡಿ ಮಾತನಾಡಿದ ಅವರು, ‘ಸ್ವಿಡ್ಜರ್ಲೆಂಡ್‌ ದೇಶದಲ್ಲಿ ರೇಷ್ಮೆ ಬೆಳೆ ಬೆಳೆಯಲು ಉದ್ದೇಶಿಸಿ ಒಂದು ವರ್ಷದ ಹಿಂದೆ ಶಿಡ್ಲಘಟ್ಟಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದೆ. ಇನ್ನಷ್ಟು ಮಾಹಿತಿ ಪಡೆಯಲು ವಿವಿಧ ಕ್ಷೇತ್ರಗಳ ತಜ್ಞರನ್ನು ಈ ಬಾರಿ ಕರೆದುಕೊಂಡು ಬಂದಿದ್ದೇನೆ’ ಎಂದು ಅವರು ಹೇಳಿದರು.

ಸ್ವಿಡ್ಜರ್ಲೆಂಡ್‌ನಲ್ಲಿ ಸ್ವಲ್ಪಮಟ್ಟಿಗಿನ ರೇಷ್ಮೆ ಉತ್ಪಾದನೆಯಿದೆ. ಭಾರತದ ಸಹಕಾರದೊಂದಿಗೆ ಅದನ್ನು ಅಭಿವೃದ್ಧಿ ಗೊಳಿಸುವ ಯೋಚನೆಯಿದೆ. ಹೈನು ಗಾರಿಕೆ, ನೀರಿನ ಸದ್ಬಳಕೆ ಬಗ್ಗೆಯೂ ಅಧ್ಯಯನ ನಡೆಸುತ್ತಿದ್ದೇವೆ. ಜಿಕೆ ವಿಕೆಯ ರೇಷ್ಮೆ ವಿಭಾಗದ ಪ್ರೊ.ಚಂದ್ರಶೇಖರ್‌ ಗೌಡ ಅವರೊಂದಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರೇಷ್ಮೆಯ ಬೆಳೆಯುವ ಬಗ್ಗೆ ಕ್ಷೇತ್ರದರ್ಶನ ಮಾಡಿ ಮಾಹಿತಿ ಪಡೆಯಲಾಗುವುದು’ ಎಂದರು.

ಇಂಡೋ ಸ್ವಿಜ್‌ ಜಂಟಿಯಾಗಿ ರೇಷ್ಮೆ ಬೆಳೆಯುವ ಕೆಲಸವನ್ನು ಸ್ವಿಡ್ಜರ್ಲೆಂಡ್‌ ದೇಶದಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಉದ್ದೇಶವಿದೆ. ಸ್ವಿಡ್ಜರ್ಲೆಂಡ್‌ನಲ್ಲಿ 10 ರಿಂದ 30 ಡಿಗ್ರಿ ವರೆಗೆ ತಾಪಮಾನ ವೈಪರೀತ್ಯವಿದೆ. ಆ ದೃಷ್ಟಿಯಿಂದಲೂ ಅಧ್ಯಯನ ಮಾಡಿದ್ದು, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಕೇಂದ್ರೀಯ ರೇಷ್ಮೆ ಮಂಡಳಿ ‌ಸಹಕಾರದಿಂದ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ವಿವರಿಸಿದರು.

ಜಿಕೆವಿಕೆಯ ರೇಷ್ಮೆ ವಿಭಾಗದ ಪ್ರೊ.ಚಂದ್ರಶೇಖರ್‌ ಗೌಡ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕು ರೇಷ್ಮೆ ಮತ್ತು ಹೈನುಗಾರಿಕೆಗೆ ಪ್ರಸಿದ್ಧಿ. ಹಾಗಾಗಿ ಅಧ್ಯಯನಶೀಲರಿಗೆ ಅನುಕೂಲಕರ. ರೇಷ್ಮೆಯ ವಿವಿಧ ಹಂತಗಳು, ಮಾರುಕಟ್ಟೆಯ ಸ್ಥಿತಿಗತಿ, ಅದರ ಉತ್ಪನ್ನಗಳು, ಬಳಕೆ ಎಲ್ಲವನ್ನೂ ಸ್ವಿಡ್ಜರ್ಲೆಂಡ್‌ ದೇಶದಿಂದ ಬಂದ 18 ಮಂದಿ ತಜ್ಞರಿಗೆ ವಿವರಿಸುತ್ತಿದ್ದೇವೆ. ನೀರಿನ ಸದುಪಯೋಗ ಹಾಗೂ ಕಾಫಿಯ ಕುರಿತಂತೆಯೂ ಅವರು ಅಧ್ಯಯನ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು..

ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್‌.ಕೆ.ಸುರೇಶ್‌ ಅವರ ಚಾಕಿ ಕೇಂದ್ರ, ಹಿಪ್ಪುನೇರಳೆ ತೋಟ, ರೇಷ್ಮೆ ಹುಳು ಸಾಕಾಣಿಕಾ ಮನೆ, ಹಿತ್ತಲಹಳ್ಳಿ ಜಿ.ಗೋಪಾಲಕೃಷ್ಣ ಅವರ ರೇಷ್ಮೆ ಹುಳು ಸಾಕಾಣಿಕಾ ಮನೆ, ರೇಷ್ಮೆ ಗೂಡಿನ ಮಾರುಕಟ್ಟೆ, ದ್ಯಾವಪ್ಪನಗುಡಿ ಬಳಿಯ ಸಯ್ಯದ್‌ ಅಜಂ ಅವರ ಸ್ವಯಂಚಾಲಿತ ರೀಲಿಂಗ್‌ ಕೇಂದ್ರ ವೀಕ್ಷಿಸಿ ವಿವರ ಪಡೆದರು.

ಹಿಸುಕಿದ ಅವರೆ ಬೇಳೆ ಸಾರಿಗೆ ಮನಸೋತರು

ಸ್ವಿಡ್ಜರ್ಲೆಂಡ್‌ನ ಫ್ರಿಟ್ಜ್‌ ಶ್ನೀಡರ್‌ ತಂಡದ ಸದಸ್ಯರಿಗೆ ಎಂದು ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್‌.ಕೆ.ಸುರೇಶ್‌ ದೇಶಿ ಶೈಲಿಯ ಖಾದ್ಯ ಮಾಡಿಸಿದ್ದರು. ಚಪಾತಿ, ಹಿಸುಕಿದ ಅವರೆ ಬೇಳೆ ಸಾರು, ಪಲಾವ್‌, ಅನ್ನ, ಮೊಸರುಬಜ್ಜಿ, ತಿಳಿಸಾರು, ಬೇಯಿಸಿದ ಮೊಟ್ಟೆ ತಿಂದು ಅವುಗಳ ರುಚಿಗೆ ಮನಸೋತರು. ಅಡುಗೆ ಮಾಡಿದವರನ್ನು ಕರೆದು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಹಿಸುಕಿದ ಅವರೆ ಬೇಳೆ ಸಾರಿನ ಬಗ್ಗೆ ಅದರ ತಯಾರಿಕೆಯ ಬಗ್ಗೆಯೂ ಮಾಹಿತಿ ಕೇಳಿ ಪಡೆದದ್ದು ವಿಶೇಷ.

* * 

ರೇಷ್ಮೆ, ಕಾಫಿ ಕೃಷಿಯನ್ನು ವಿಭಿನ್ನ ದೃಷ್ಟಿಯಿಂದ ಅಧ್ಯಯನ ಮಾಡಲಾಗಿದೆ. ನಮ್ಮ ದೇಶದ ವಾತಾವರಣಕ್ಕೆ ತಕ್ಕಂತೆ ಅಳವಡಿಸಕೊಳ್ಳಲಾಗುವುದು
ಫ್ರಿಟ್ಜ್‌ ಶ್ನೀಡರ್‌, ಸಲಹೆಗಾರ ಜಾನುವಾರು ಅಭಿವೃದ್ಧಿ ಸಂಸ್ಥೆ, ಸ್ವಿಟ್ಜರ್ಲೆಂಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT