ಮಂಗಳೂರು: ದುಬೈನಿಂದ ಮೊಬೈಲ್ ರೂಪದಲ್ಲಿ ಚಿನ್ನ ಕಳ್ಳಸಾಗಣೆ ಮಾಡಿಕೊಂಡು ಬಂದ ಕಾಸರಗೋಡಿನ ಯುವಕನೊಬ್ಬನನ್ನು ಮಂಗಳವಾರ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ಐ) ಅಧಿಕಾರಿಗಳು, 1.2 ಕೆ.ಜಿ. ಚಿನ್ನ ವಶಪಡಿಸಿಕೊಂಡಿದ್ದಾರೆ.
ಕಾಸರಗೋಡಿನ ಅಹಮ್ಮದ್ ನಬೀಲ್ ಗಫೂರ್ (21) ಬಂಧಿತ. ಈತ ಮಂಗಳವಾರ ಸಂಜೆ 6 ಗಂಟೆಗೆ ಸ್ಪೈಸ್ ಜೆಟ್ ವಿಮಾನದಲ್ಲಿ ದುಬೈನಿಂದ ಮಂಗಳೂರಿಗೆ ಬಂದಿದ್ದ.
ಖಚಿತ ಮಾಹಿತಿ ಆಧರಿಸಿ ಈತನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ₹ 39 ಲಕ್ಷ ಮೌಲ್ಯದ 1 ಕೆ.ಜಿ. 282 ಗ್ರಾಂ ತೂಕದ ಚಿನ್ನದ ಗಟ್ಟಿಗಳು ಪತ್ತೆಯಾಗಿವೆ ಎಂದು ಎಂದು ಡಿಆರ್ಐ ಮಂಗಳೂರು ವಿಭಾಗದ ಉಪ ನಿರ್ದೇಶಕ ವಿನಾಯಕ್ ಭಟ್ ತಿಳಿಸಿದ್ದಾರೆ.