ಬೆಂಗಳೂರು: ‘ಕನಸು ಮತ್ತು ಗುರಿಗಳೆರಡೂ ಬೇರೆ ಬೇರೆಯಾಗಿರುತ್ತವೆ. ವಿದ್ಯಾರ್ಥಿಗಳು ಗುರಿ ಸಾಧಿಸುವ ಕಡೆಗೆ ಗಮನ ಕೊಡಬೇಕು’ ಎಂದು ಲೇಖಕ ಚೇತನ್ ಭಗತ್ ಸಲಹೆ ನೀಡಿದರು.
ಯಲಹಂಕ ಬಳಿಯ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯವು ಬುಧವಾರ ಆಯೋಜಿಸಿದ್ದ ‘ಪವರ್ಟಾಕ್ ಸರಣಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕನಸು ಕಾಣುವುದು ಸುಲಭ. ಆದರೆ, ಅದನ್ನು ನನಸು ಮಾಡಲು ಸಾಕಷ್ಟು ಶ್ರಮಪಡಬೇಕು’ ಎಂದರು.
‘ಗುರಿ ಸಾಧನೆಗೆ ನಿರ್ದಿಷ್ಟ ಸಮಯ ನಿಗದಿಪಡಿಸಿಕೊಳ್ಳುವುದು ಬಹಳ ಮುಖ್ಯ. ಒಂದು ಗುರಿ ತಲುಪಿದ ನಂತರ ಮತ್ತೊಂದರ ಬೆನ್ನು ಹತ್ತಬೇಕು’ ಎಂದರು.
‘ಅಸಾಧ್ಯವೆನಿಸಿದ್ದನ್ನು ಸಾಧಿಸಿದಾಗ ಮಾತ್ರ ಯಶಸ್ಸಿಗೆ ನಿಜವಾದ ಅರ್ಥ ಬರುತ್ತದೆ. ಇದನ್ನು ನಾನು ಅಳವಡಿಸಿಕೊಳ್ಳದೇ ಹೋಗಿದ್ದರೆ ಇಂದು ನಾನು ಲೇಖಕ ಆಗುತ್ತಿರಲಿಲ್ಲ. ಅದರ ಬದಲು ಎಸ್ಟಿಡಿ ಬೂತ್ನ ಮಾಲೀಕನಾಗಿರುತ್ತಿದ್ದೆ. ಅಂದು ಎಸ್ಟಿಡಿ ಬೂತ್ಗೆ ಹೆಚ್ಚು ಬೇಡಿಕೆ ಇತ್ತು. ದೆಹಲಿಯಲ್ಲಿ ಬೂತ್ ತೆರೆಯುವ ಬಗ್ಗೆ ಪೋಷಕರಲ್ಲಿ ಪ್ರಸ್ತಾಪಿಸಿದಾಗ ಸಮ್ಮತಿಸಿದ್ದರು’ ಎಂದು ನೆನಪಿಸಿಕೊಂಡರು.
‘ಐಐಟಿ ಮತ್ತು ಐಐಎಂಗಳಲ್ಲಿ ಪ್ರವೇಶ ಪಡೆಯುವುದು ಕಷ್ಟವೆಂದು ತಿಳಿದಿದ್ದೆ. ಆದರೆ, ಪೋಷಕರು ಧೈರ್ಯ ತುಂಬಿದರು. ಶ್ರಮಪಟ್ಟು ಓದಿದೆ. ಅಲ್ಲಿ ಪ್ರವೇಶ ಪಡೆದೆ. ಅಸಾಧ್ಯವೆನಿಸಿದ್ದನ್ನು ಸಾಧಿಸಿದಾಗ ಮಾತ್ರ ಸಮಾಜದಲ್ಲಿ ಉತ್ತಮ ಮನ್ನಣೆ ದೊರೆಯಲು ಸಾಧ್ಯ’ ಎಂದು ವಿವರಿಸಿದರು.