ನರಗುಂದ: ‘ಮಹದಾಯಿಗಾಗಿ ಇಡೀ ರಾಜ್ಯವೇ ಒಂದಾಗಿ ಹೋರಾಟ ನಡೆಸುತ್ತಿದೆ. ಈ ಸಮಸ್ಯೆ ಇತ್ಯರ್ಥಪಡಿಸಲು ರಾಜಕೀಯ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಬೇಕು’ ಎಂದು ಹೋರಾಟ ಸಮಿತಿ ಸದಸ್ಯ ಚಂದ್ರಗೌಡ ಪಾಟೀಲ ಆಗ್ರಹಿಸಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಮಹ ದಾಯಿ ಧರಣಿಯ 931ನೇ ದಿನವಾದ ಬುಧವಾರ ಅವರು ಮಾತನಾಡಿದರು. ‘ಈ ಭಾಗದ ರೈತರ ಸಹನೆಯ ಕಟ್ಟೆ ಒಡೆದಿದೆ. ಗೋವಾದಲ್ಲಿ ಎಲ್ಲ ಪಕ್ಷಗಳು ಒಂದಾಗಿವೆ. ಕರ್ನಾಟಕದ ಎಲ್ಲ ಪಕ್ಷಗಳು ಈಗಲಾದರೂ ಒಂದಾಗಬೇಕು’ ಎಂದರು.
‘ಮಹದಾಯಿ ಹೋರಾಟದ ಪ್ರತಿ ಹಂತದಲ್ಲಿ ನೂರಾರು ಸಂಘಟನೆಗಳು ಕೈ ಜೋಡಿಸಿವೆ. ಮಠಾಧೀಶರು ಹಾಗೂ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಆದರೂ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಜಾರಿಗೆ ಹಿನ್ನಡೆ ಆಗುತ್ತಿದೆ.ಇದು ಸರಿಯಲ್ಲ. ಎಂದರು.
‘ಮಹದಾಯಿ ನಮ್ಮ ಹಕ್ಕು. ಅದು ಸಿಗುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ. ವಿವಿಧ ರೂಪದಲ್ಲಿ ಹೋರಾಟದ ಬಿಸಿ ಮುಟ್ಟಿಸಿದ್ದೇವೆ. ಆದರೂ, ಸರ್ಕಾರಗಳು ತಮ್ಮ ಮೊಂಡು ಧೋರಣೆ ಬಿಡುತ್ತಿಲ್ಲ.
ಇದು ಸರಿಯಾದ ಕ್ರಮ ಅಲ್ಲ. ರೈತರ ಋಣದಲ್ಲಿ ಬದುಕುವ ರಾಜಕಾರಣಿಗಳು ಮೊದಲು ತಮಗೆ ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಬೇಕು. ಅವರಿಗೆ ಬೇಕಾದ ಮೂಲ ಸೌಲಭ್ಯ ಒದಗಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳು ಮುಂದಾಗಬೇಕು’ ಎಂದು ಭರತಕುಮಾರ ಆಗ್ರಹಿಸಿದರು.