ಹನೂರು: ಕಾವೇರಿ ಮತ್ತು ಮಲೆಮಹದೇಶ್ವರ ವನ್ಯಧಾಮಗಳಿಗೆ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್ ಮಂಗಳವಾರ ಭೇಟಿ ನೀಡಿ ಅರಣ್ಯ ಸಂರಕ್ಷಣೆಯ ಬಗ್ಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಡನೆ ಚರ್ಚೆ ನಡೆಸಿದರು.
ಮಲೆಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ ವನ್ಯಜೀವಿ ವಲಯಕ್ಕೆ ಭೇಟಿ ನೀಡಿದ ಅವರು, ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯದ ಸುತ್ತಲೂ ತೆಗೆದಿರುವ ಆನೆಕಂದಕ ಹಾಗೂ ಸ್ಪೈಕ್ ಪಿಲ್ಲರ್ಗಳನ್ನು ವೀಕ್ಷಿಸಿದರು.
ಬಳಿಕ ಕಳ್ಳ ಬೇಟೆ ತಡೆ ಶಿಬಿರಕ್ಕೆ ತೆರಳಿದ ಅವರು, ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕಾಳ್ಗಿಚ್ಚು ತಡೆಯಲು ಸಿಬ್ಬಂದಿ ಅನುಸರಿಸಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಹನೂರು ವನ್ಯಜೀವಿ ವಲಯಕ್ಕೆ ತೆರಳಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಂ.ಮಾಲತಿ ಪ್ರಿಯಾ, ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್ ಕುಮಾರ್, ಎಸಿಎಫ್ ವನಿತಾ, ವಲಯ ಅರಣ್ಯಾಧಿಕಾರಿ ಸಯ್ಯಾದ್ಸಾಬಾ. ಎಚ್. ನದಾಫ್ ಹಾಗೂ ಸಿಬ್ಬಂದಿ ಇದ್ದರು.