ಹೈದರಾಬಾದ್: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಮಂಡಿಸಿದ ಕೇಂದ್ರ ಬಜೆಟ್ನಲ್ಲಿ ರಾಜ್ಯದ ಬೇಡಿಕೆಗಳಿಗೆ ಸ್ಪಂದಿಸದಿರುವುದು ‘ಅತ್ಯಂತ ನಿರಾಸೆ’ ತರಿಸಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ತೆಲುಗು ದೇಶಂ ಪಾರ್ಟಿ(ಟಿಡಿಪಿ) ದಕ್ಷಿಣ ಭಾರತದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ದೊಡ್ಡ ಪಕ್ಷವಾಗಿದೆ. ಕೇಂದ್ರ ಬಜೆಟ್ನಿಂದ ಅಸಮಾಧಾನಗೊಂಡಿರುವ ಚಂದ್ರಬಾಬು ನಾಯ್ಡು ಅವರು ಭಾನುವಾರ ಪಕ್ಷದ ಕಾರ್ಯಕರ್ತರ ತುರ್ತುಸಭೆ ಕರೆಸಿದ್ದಾರೆ.
ಆಂಧ್ರದ ರಾಜಧಾನಿ ಅಮರಾವತಿಗೆ ಮೆಟ್ರೊ ಯೋಜನೆಗೆ ವಿಶೇಷ ಪ್ಯಾಕೇಜ್ ಘೋಷಿಸುವ ಭರವಸೆ ಇತ್ತು. ಆದರೆ, ಅದು ಹುಸಿಯಾಗಿದೆ ಎಂದು ಟಿಡಿಪಿ ಪಕ್ಷದ ಮುಖಂಡ ವೈ.ಎಸ್ ಚೌಧರಿ ಹೇಳಿದ್ದಾರೆ.
ಕೇಂದ್ರ ಬಿಜೆಪಿಯ ಮೈತ್ರಿ ಪಕ್ಷವಾಗಿರುವ ಟಿಡಿಪಿ, 2014ರಲ್ಲಿ ಆಂಧ್ರಪ್ರದೇಶ ವಿಂಗಡಣೆಯಾಗಿದ್ದು, ರಾಜ್ಯಕ್ಕೆ ವಿಶೇಷ ಪ್ರಾತಿನಿಧ್ಯತೆಯನ್ನು ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು.
‘ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ದೆಹಲಿಗೆ ಹಲವು ಭೇಟಿ ನೀಡಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ರಾಜ್ಯದ ಬೇಡಿಕೆಗಳನ್ನು ತಿಳಿಸಿದ್ದಾರೆ. ಆದರೆ, ಬಜೆಟ್ ಭಾಷಣದಲ್ಲಿ ಅವರ ಹೆಸರನ್ನು ಉಲ್ಲೇಖಿಸಲಿಲ್ಲ ಎಂದು ಟಿಡಿಪಿ ಶಾಸಕ ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ‘ತ್ರಿವಳಿ ತಲಾಖ್’ ಮಸೂದೆ ಅಂಗೀಕಾರಕ್ಕೆ ಸಂಬಂಧಿಸಿ ಬಿಜೆಪಿ, ಮಿತ್ರ ಪಕ್ಷಗಳನ್ನು ಒಳಗೊಂಡಂತೆ ಸ್ಪಷ್ಟ ಬಹುಮತವನ್ನು ಹೊಂದಿಲ್ಲ. ಹಾಗಾಗಿ ಬಜೆಟ್ನಲ್ಲಿ ಸಮಾಧಾನಗೊಂಡಿರುವ ಟಿಡಿಪಿ, ಬಿಜೆಪಿಗೆ ಬೆಂಬಲ ಸೂಚಿಸುವುದು ಅನುಮಾನ ಎಂದು ಹೇಳಲಾಗಿದೆ.