ಮುನಿರಾಬಾದ್: ‘ಭಾರತ ಹುಣ್ಣಿಮೆ’ಯ ಶುಭ ಸಂದರ್ಭದಲ್ಲಿ ಮಂಗಳವಾರ ಮತ್ತು ಬುಧವಾರ ಸಾವಿರಾರು ಭಕ್ತರು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಶಕ್ತಿದೇವತೆ ಹುಲಿಗೆಮ್ಮದೇವಿಯ ದರ್ಶನ ಪಡೆದರು.
ಕರ್ನಾಟಕ ಮಾತ್ರವಲ್ಲದೆ ಆಂಧ್ರ, ಮಹಾರಾಷ್ಟ್ರ, ತಮಿಳುನಾಡು ಭಾಗದಿಂದ ಕೂಡ ಕುಟುಂಬ ಸಮೇತ ಇಲ್ಲಿಗೆ ಬರುವ ಭಕ್ತರು ನದಿಯಲ್ಲಿ ಸ್ನಾನ ಮಾಡಿ, ದೀಡ್ ನಮಸ್ಕಾರ, ತಲೆಮಂಡಿ, ಜವಳ ತೆಗೆಯುವುದು ಮುಂತಾದ ಹರಕೆಗಳನ್ನು ತೀರಿಸಿದರು.
ವಿವಿಧ ಭಾಗಗಳಿಂದ ಬಂದ ಭಕ್ತರಲ್ಲಿ ಕೆಲವರು ಸಿದ್ಧ ಮಾಂಸವನ್ನು ಕೊಂಡುತಂದು ಅಲ್ಲೇ ಅಡುಗೆ ತಯಾರಿಸಿ, ಜೋಗತಿಯರಿಗೆ ಪ್ರಸಾದ ನೀಡಿದ ನಂತರ ಊಟಮಾಡಿದರೆ, ಇನ್ನು ಕೆಲವರು ತಮ್ಮ ಜೊತೆ ಕುರಿ ಮೇಕೆಗಳನ್ನು ತಂದಿದ್ದರು.
ಬುಧವಾರ ಚಂದ್ರ ಗ್ರಹಣದ ನಿಮಿತ್ತ ಮಧ್ಯಾಹ್ನ 12.30ರವರೆಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು ನಂತರ ಗರ್ಭಗುಡಿಯ ಬಾಗಿಲು ಮುಚ್ಚಲಾಯಿತು. ಕೆಲವು ಭಕ್ತರು ಹೊರಗಡೆ ಕೈಮುಗಿದು ಹೋಗುತ್ತಿದ್ದರೆ, ನೂರಾರು ಭಕ್ತರು ದೇವಸ್ಥಾನದ ಆವರಣದಲ್ಲಿ ವಾಸ್ತವ್ಯ ಹೂಡಿದ್ದರು.