ಹೊಸಪೇಟೆ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಫೇಬ್ರುವರಿ 10 ರಂದು ನಗರಕ್ಕೆ ಭೇಟಿ ನೀಡಲಿರುವ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ಇಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹಾಗೂ ಕಾಂಗ್ರೆಸ್ ಮುಖಂಡ ದೀಪಕ್ ಕುಮಾರ್ ಸಿಂಗ್ ನಡುವೆ ವಾಗ್ವಾದ ನಡೆಯಿತು.
‘ಆನಂದ್ ಸಿಂಗ್ ಅವರನ್ನು ಕಾಂಗ್ರೆಸ್ಗೆ ಸೇರಿಸಿಕೊಂಡಿದ್ದು ತಪ್ಪು. ಸಚಿವರಾದ ನೀವು ತಪ್ಪು ಮಾಡಿದ್ದೀರಿ’ ಎಂದು ದೀಪಕ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂತೋಷ್ ಲಾಡ್ ಅವರು, ‘ಈ ಬಗ್ಗೆ ನನ್ನನ್ನು ಕೇಳಬೇಡಿ. ಏನಿದ್ದರೂ ಹೈಕಮಾಂಡ್ ಕೇಳಿ’ ಎಂದು ಹೇಳಿದರು.
ಈ ವೇಳೆ, ‘ಹಾಗಿದ್ದರೆ ಇಲ್ಲಿ ನಾವು ಮಾಡುತ್ತಿರುವ ಕೆಲಸವನ್ನು ಹೈಕಮಾಂಡ್ ಬಂದು ನೋಡುತ್ತದೆಯೇ’ ಎಂದು ಸಿಂಗ್ ಪ್ರಶ್ನಿಸಿದರು. ಇದರಿಂದಾಗಿ ವೇದಿಕೆಯಲ್ಲೇ ಇಬ್ಬರ ಮಧ್ಯೆ ವಾಗ್ವಾದ ನಡೆದು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.