‘ಇಳಕಲ್ ತಾಲ್ಲೂಕಿನ ವಜ್ಜಲ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 39 ಮಕ್ಕಳು ಹಂಪಿ ಪ್ರವಾಸಕ್ಕೆ ಬಂದಿದ್ದರು. ಪ್ರವಾಸ ಮುಗಿಸಿಕೊಂಡು ರಾತ್ರಿ 8ಗಂಟೆ ಸುಮಾರಿಗೆ ಹಿಂತಿರುಗುತ್ತಿದ್ದಾಗ ಬಸ್ಸಿನ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ಸಿನ ಹಿಂದೆ ಬರುತ್ತಿದ್ದ ಜಿಂದಾಲ್ ಕಂಪನಿ ಬಸ್ಸಿನ ಚಾಲಕ ಅದನ್ನು ಗಮನಿಸಿದ್ದಾರೆ. ಕೂಡಲೇ ಓವರ್ಟೇಕ್ ಮಾಡಿ ಅದನ್ನು ನಿಲ್ಲಿಸಿದ್ದಾರೆ. ಬಸ್ಸಿನಲ್ಲಿದ್ದ ಎಲ್ಲ ಮಕ್ಕಳು, ನಾಲ್ವರು ಶಿಕ್ಷಕರು ಹಾಗೂ ಚಾಲಕ ಕೆಳಗಿಳಿದು ದೂರ ಹೋಗಿದ್ದಾರೆ. ಈ ವೇಳೆ ಬೆಂಕಿ ಇಡೀ ಬಸ್ಸಿಗೆ ವ್ಯಾಪಿಸಿಕೊಂಡು ಧಗಧಗನೆ ಉರಿದಿದೆ. ಬಸ್ಸಿನಲ್ಲಿದ್ದ ಮಕ್ಕಳ ಬಟ್ಟೆ ಸೇರಿದಂತೆ ಇತರೆ ವಸ್ತುಗಳು ಸುಟ್ಟು ಕರಕಲಾಗಿವೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.