ಶಿವಮೊಗ್ಗ: ಕೆನರಾ ಬ್ಯಾಂಕ್ ಅಧಿಕಾರಿ ಪ್ರಸನ್ನ ಸುಂದರವದನಂ ಅವರನ್ನು ಹಣಕ್ಕಾಗಿ ಅಪಹರಿಸಿದ್ದ ಐವರು ಆರೋಪಿಗಳನ್ನು ಕೋಟೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮೈಸೂರಿನ ಅಕ್ರಂ (30), ಶಿವಮೊಗ್ಗದ ಮಹಮದ್ ಸಾಯಿಲ್ (20), ಮಹಮದ್ ಯೂಸುಫ್ (19), ದೀಪಕ್ ಹೆಗ್ಡೆ (21) ಮತ್ತು ನೂರ್ ಅಹಮದ್ (26) ಬಂಧಿತರು.
ಇಲ್ಲಿನ ಶೇಷಾದ್ರಿಪುರಂನ ಮಹಿಳೆಯನ್ನು ಮೈಸೂರಿನ ಅಕ್ರಂ ವಿವಾಹವಾಗಿದ್ದರು. ಕೆನರಾ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದ ಮಹಿಳೆ ವ್ಯವಹಾರಕ್ಕಾಗಿ ಬ್ಯಾಂಕ್ಗೆ ಬಂದಾಗ ಅಧಿಕಾರಿಯ ಪರಿಚಯವಾಗಿದೆ. ಸಲುಗೆ ಬೆಳೆದಿದೆ. ಇದನ್ನು ಸಹಿಸದ ಪತಿ ಅಕ್ರಂ ಮತ್ತು ಸಹಚರರು ಸೇರಿ ಅಪಹರಣ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಅಪಹರಣ ಮಾಡಿದ ನಂತರ ಕೊಠಡಿಯಲ್ಲಿ ಕೂಡಿಹಾಕಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಬ್ಯಾಂಕ್ ವ್ಯವಸ್ಥಾಪಕರು ನೀಡಿದ ಮಾಹಿತಿ ಮೇಲೆ ಪೊಲೀಸರು ತುಂಗಾ ನದಿಯ ಬಳಿ ದಾಳಿ ನಡೆಸಿದ್ದರು. ಆಗ ಅಧಿಕಾರಿಯನ್ನು ಅಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣ ಕೋಟೆ ಠಾಣೆಯಲ್ಲಿ ದಾಖಲಾಗಿತ್ತು.