ಧಾರವಾಡ: ‘ಬದಲಾಗುವ ಹವಾಮಾನಕ್ಕೆ ಹೊಂದಿಕೊಳ್ಳುವ ತಳಿಗಳ ಸಂಶೋಧನೆ ಇಂದಿನ ಅಗತ್ಯವಾಗಿದೆ’ ಎಂದು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಜೆ.ವಿ. ಗೌಡ ತಿಳಿಸಿದರು.
ಕೃಷಿ ವಿಶ್ವವಿದ್ಯಾಲಯ, ಡಾ. ಎಸ್. ಡಬ್ಲ್ಯು. ಮೆಣಸಿನಕಾಯಿ ಸ್ಮಾರಕ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಗುರುವಾರ ಜರುಗಿದ ಜೆನಿಟಿಕ್ಸ್ ಮತ್ತು ಸೈಟೋಜಿನೆಟಿಕ್ಸ್ ವೈಜ್ಞಾನಿಕ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಎನ್.ಕೆ.ಕೃಷ್ಣಕುಮಾರ ಮಾತನಾಡಿ, ‘ ನೀರಿನ ಲಭ್ಯತೆ ಕಡಿಮೆಯಾಗಿದೆ. ಅಂತರ್ಜಲ ಮಟ್ಟ 800ರಿಂದ 1ಸಾವಿರ ಅಡಿ ಆಳಕ್ಕೆ ಕುಸಿದಿದೆ. ಹೀಗಾಗಿ ನೀರು ಸಂರಕ್ಷಣೆಗೆ ಆದ್ಯತೆ ನೀಡಬೇಕು. ಬಾಳೆಗೆ ಫಿಜೋರಿಯಂ ವಿಲ್ಟ್ ಎಂಬ ರೋಗಾಣು ಭಾರತದಲ್ಲಿ ಮತ್ತೆ ಕಂಡುಬಂದಿದೆ. ಅದರ ನಿರ್ವಹಣೆ ವಿಜ್ಞಾನಿಗಳಿಗೆ ಒಂದು ಸವಾಲಾಗಿದೆ’ ಎಂದರು.
ಇದೇ ಸಂದರ್ಭದಲ್ಲಿ ಪಂಜಾಬ್ ವಿಶ್ವವಿದ್ಯಾಲಯದ ಡಾ. ಗುರುದೇವಸಿಂಗ್ ಖುಷ್ ಅವರಿಗೆ ‘ಜೀವಮಾನ ಸಾಧನಾ ಪ್ರಶಸ್ತಿ’ ನೀಡಿ ಅಭಿನಂದಿಸಲಾಯಿತು. ಡಾ. ಎಸ್.ಡಬ್ಲ್ಯು. ಮೆಣಸಿನಕಾಯಿ ಪುತ್ರಿ ಪೂರ್ಣಿಮಾ ಮಾತನಾಡಿದರು. ಶಿಕ್ಷಣ ನಿರ್ದೇಶಕ ಡಾ. ಬಿ.ಎಸ್.ಜನಗೌಡರ ಅಧ್ಯಕ್ಷತೆ ವಹಿಸಿದ್ದರು.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಂ. ಸಾಲಿಮಠ, ಮಾಜಿ ಕುಲಪತಿ ಡಾ. ಜೆ.ಎಚ್.ಕುಲಕರ್ಣಿ, ಡಾ. ಎಚ್. ಬಸಪ್ಪ, ಡಾ. ಆರ್.ಎಸ್. ಗಿರಡ್ಡಿ, ಡಾ. ವಿ.ಐ. ಬೆಣಗಿ, ಡಾ. ಎಸ್.ಟಿ. ನಾಯಕ ಇದ್ದರು.