ಮದುರೆ : ಪ್ರಸಿದ್ಧ ಮದುರೆ ಮೀನಾಕ್ಷಿ ದೇವಾಯದ ಆವರಣದಲ್ಲಿ ಶುಕ್ರವಾರ ರಾತ್ರಿ ಅಗ್ನಿ ಅನಾಹುತ ಸಂಭವಿಸಿದ್ದು, ಕನಿಷ್ಠ 40 ಅಂಗಡಿಗಳು ಭಸ್ಮವಾಗಿವೆ.
‘ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಯೊಂದರಲ್ಲಿ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಹತ್ತಿಕೊಂಡಿರಬೇಕು, ಅನಂತರ ಎಲ್ಲಾ ಅಂಗಡಿಗಳಿಗೂ ಹರಡಿದೆ. ಯಾರಿಗೂ ಗಾಯಗಳಾಗಿಲ್ಲ’ ಎಂದು ದೇವಾಲಯದ ಅಧಿಕಾರಿಗಳು ಹೇಳಿದ್ದಾರೆ.
‘ದೇವಾಲಯದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಕೂಡಲೇ ಬೆಂಕಿ ನಂದಿಸಿರುವುದರಿಂದ ದೇಗುಲದ ಒಳಭಾಗದಲ್ಲಿರುವ ಶಿಲ್ಪಗಳಿಗೆ ಹಾನಿಯಾಗಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.
‘ದೇವಾಲಯದಲ್ಲಿ ಪೂಜಾವಿಧಿಗಳು ಎಂದಿನಂತೆ ನಡೆದಿವೆ. ಅಗ್ನಿ ಅನಾಹುತ ಸಂಭವಿಸಿರುವ ಸ್ಥಳದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇವಾಲಯದ ಆವರಣದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಲು ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳು ಒತ್ತಾಯಿಸಿವೆ.
ಕ್ರಮಕ್ಕೆ ಆಗ್ರಹ: ಅಗ್ನಿ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ವಹಿಸದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ತಮಿಳುನಾಡಿನ ಹಿಂದೂ ಸಂಘಟನೆಗಳು ಆಗ್ರಹಿಸಿವೆ.
‘ಅಗ್ನಿ ಅನಾಹುತ ಸಂಭವಿಸಿರುವುದು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ನಿರ್ಲಕ್ಷ್ಯಕ್ಕೆ ಉದಾಹರಣೆ’ ಎಂದು ಹಿಂದೂ ಮುನ್ನಣಿ ಸಂಸ್ಥಾಪಕ ರಾಮಗೋಪಾಲನ್ ಹೇಳಿದ್ದಾರೆ.