ಬೆಂಗಳೂರು: ಬ್ಯಾಟರಾಯನಪುರದ ಹೆಗ್ಗಡೆನಗರದಲ್ಲಿ ಸರ್ಕಾರದ ವತಿಯಿಂದ ನಿರ್ಮಿಸಿರುವ ₹1.35 ಕೋಟಿ ವೆಚ್ಚದ ಸಮುದಾಯ ಭವನವನ್ನು ಕೃಷಿ ಸಚಿವ ಕೃಷ್ಣಬೈರೇಗೌಡ ಶನಿವಾರ ಉದ್ಘಾಟಿಸಿದರು.
ಹೆಗ್ಗಡೆನಗರ ಸುತ್ತಮುತ್ತಲ ಬಡಾವಣೆಗಳಲ್ಲಿ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಜನರು ಹೆಚ್ಚಾಗಿ ವಾಸವಿದ್ದಾರೆ. ಅವರಿಗೆ ಅನುಕೂಲವಾಗಲೆಂದು ಈ ಭವನ ನಿರ್ಮಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಭವನದ ಉಸ್ತುವಾರಿಯನ್ನು ಬಿಬಿಎಂಪಿಯೇ ನೋಡಿಕೊಳ್ಳುತ್ತದೆ. ಕಡಿಮೆ ದರದಲ್ಲಿ ಭವನವನ್ನು ಬಾಡಿಗೆಗೆ ನೀಡಲಾಗುತ್ತದೆ. ಇದರ ಉಪಯೋಗವನ್ನು ಸಾರ್ವಜನಿಕರು ಪಡೆಯಬೇಕು ಎಂದರು.
ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. 20 ಕೊಳವೆ ಬಾವಿಗಳನ್ನು ಕೊರೆಸಿದರೂ ನೀರು ಸಿಕ್ಕಿಲ್ಲ. ಹೀಗಾಗಿ, ಕಾವೇರಿ ನೀರನ್ನು ಪೂರೈಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದು ಪೂರ್ಣಗೊಂಡರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಹೇಳಿದರು.