ಬೆಂಗಳೂರು: ‘ಸಂತೋಷ್ ಹತ್ಯೆಗೆ ಸ್ಕ್ರೂ ಡ್ರೈವರ್ ಬಳಕೆ ಮಾಡಲಾಗಿದೆ’ ಎಂಬ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶನಿವಾರ ಸ್ಕ್ರೂಡ್ರೈವರ್ ಅಭಿಯಾನ ನಡೆಸಿದರು.
ಅಭಿಯಾನಕ್ಕೆ ಚಾಲನೆ ನೀಡಿದ ಸಂಸದ ಪ್ರತಾಪ ಸಿಂಹ, ‘ರಾಮಲಿಂಗಾರೆಡ್ಡಿ ಗೃಹ ಸಚಿವರಾದ ನಂತರ ಗೌರಿ ಲಂಕೇಶ್, ದೀಪಕ್ ರಾವ್ ಹಾಗೂ ಸಂತೋಷ್ ಸೇರಿ ಹಲವರ ಹತ್ಯೆಯಾಗಿದೆ. ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ ಉಗ್ರವಾದ ನಡೆಯುತ್ತಿದೆ’ ಎಂದು ಆರೋಪಿಸಿದರು.
‘ಪಾಕಿಸ್ತಾನ ತನ್ನ ನೆಲದಲ್ಲಿ ಭಯೋತ್ಪಾನೆಗೆ ಕುಮ್ಮಕ್ಕು ನೀಡುತ್ತಿರುವ ರೀತಿಯಲ್ಲೇ ಸಿದ್ದರಾಮಯ್ಯ ರಾಜ್ಯದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದಾರೆ’ ಎಂದು ದೂರಿದರು.
ಪಕೋಡಾ ಹೋರಾಟಕ್ಕೆ ಆಕ್ರೋಶ: ಪ್ರಧಾನಿ ಭಾಗವಹಿಸಲಿರುವ ಬಿಜೆಪಿ ಪರಿವರ್ತನಾ ಯಾತ್ರೆ ಸ್ಥಳದಲ್ಲಿ ಪಕೋಡಾ ಮಾರಾಟಕ್ಕೆ ವಿದ್ಯಾರ್ಥಿ ಒಕ್ಕೂಟ ಕೇಳಿರುವ ಅನುಮತಿ ಬಗ್ಗೆಯೂ ಪ್ರತಾಪ್ ಸಿಂಹ ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಪಕೋಡನಾದ್ರು ಮಾರಲಿ, ಬಜ್ಜಿ ಬೋಂಡನಾದ್ರು ಮಾರಲಿ. ಆದರೆ, ದೇಶ ಮಾರೋಕೆ ಮಾತ್ರ ಕಾಂಗ್ರೆಸ್ಗೆ ನಾವು ಬಿಡೋಲ್ಲ’ ಎಂದಿದ್ದಾರೆ.
** ‘ಸಿಂಹಕ್ಕೆ ಕಾಡೇ ಪ್ರಶಸ್ತ ತಾಣ’
ಪ್ರತಾಪ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಮಲಿಂಗರೆಡ್ಡಿ, ‘ಸದಾ ಬೆಂಕಿ ಉಗುಳುವ ಸಿಂಹಕ್ಕೆ ಕಾಡೇ ಪ್ರಶಸ್ತವಾದ ತಾಣ’ ಎಂದು ಕಟಕಿದ್ದಾರೆ.
‘ಬೆಂಕಿ ಹಚ್ಚುವುದು, ದಂಗೆ ಎಬ್ಬಿಸುವುದೇ ನಿಮ್ಮ ಉದ್ಯೋಗ. ಅಪರಾಧ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾದ ಯಾರನ್ನೂ ಸರ್ಕಾರ ಬಿಟ್ಟಿಲ್ಲ, ಬಿಡುವುದೂ ಇಲ್ಲ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.