ಹರಿಹರ: ‘ಗುರು-ವಿರಕ್ತ ಮಠಗಳ ಮಧ್ಯದ ಭಿನ್ನಮತ ತೊಡೆದು ಹಾಕಲು ಯತ್ನಿಸಿದ ವಾಗೀಶ ಪಂಡಿತಾರಾಧ್ಯರ ಸ್ಮರಣಾರ್ಥ ನೀಡುತ್ತಿರುವ ಸಮನ್ವಯ ಪ್ರಶಸ್ತಿ ಪಡೆದಿರುವುದು ನನ್ನ ಜೀವಮಾನದ ಸಾಧನೆಯಾಗಿದೆ’ ಎಂದು ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಹಾಗೂ ಪ್ರಶಸ್ತಿ ಪುರಸ್ಕೃತ ಬಿ.ಎಸ್.ಪರಮಶಿವಯ್ಯ ಅಭಿಪ್ರಾಯಪಟ್ಟರು.
ಗರದ ಎಸ್ಜೆಪಿವಿವಿ ಪೀಠದ ವತಿಯಿಂದ ಲಿಂಗೈಕ್ಯ ವಾಗೀಶ ಪಂಡಿತಾರಾಧ್ಯ ಶ್ರೀಗಳ ಸಂಸ್ಮರಣೆ ಅಂಗವಾಗಿ ಎಸ್ಜೆವಿಪಿ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ‘ಸಮನ್ವಯ ಸಿರಿ’ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
‘ಶ್ರೀಶೈಲ ಪೀಠ ಸಮನ್ವಯದ ಸಂಕೇತ. ಈ ಪೀಠದಿಂದ ನೀಡುತ್ತಿರುವ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ಆದರೆ, ಸಂಸ್ಥೆ ನನ್ನ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿರುವುದು ಸಂತೃಪ್ತಿ ಹಾಗೂ ಅಚ್ಚರಿ ಮೂಡಿಸಿದೆ’ ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ‘ಸಹಕಾರಿ ಹಾಗೂಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸಾಧನೆಗೈದ ವ್ಯಕ್ತಿಗೆ ಪ್ರಶಸ್ತಿ ನೀಡಿರುವುದು ಸಂತಸ ನೀಡಿದೆ. ಶ್ರೀ ಪೀಠದ ಸಮಾಜಮುಖಿ ಕಾರ್ಯಗಳಿಗಾಗಿ ಹಾವೇರಿಯಲ್ಲಿಶಾಖಾ ಮಠವನ್ನು ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿದರು. ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ‘ಸಮನ್ವಯ ಸಿರಿ’ ರಾಷ್ಟ್ರೀಯ ಪ್ರಶಸ್ತಿ ಹಾಗೂ ಸೇವಾಭೂಷಣ ಪ್ರಶಸ್ತಿ ಪ್ರದಾನ ಮಾಡಿದರು.
ಸಂಸ್ಥೆಗೆ ಸೇವೆ ಸಲ್ಲಿಸಿದ ಗಣ್ಯರಿಗೆ ಗೌರವ ಸಮರ್ಪಣೆ ನಡೆಯಿತು. ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸದ್ದರು. ಎಸ್ಜೆಪಿವಿವಿ ಪೀಠದ ಉಪಾಧ್ಯಕ್ಷ ಡಿ.ಎಂ. ಹಾಲಸ್ವಾಮಿ, ಕಾರ್ಯದರ್ಶಿ ಪ್ರೊ.ಜಿ. ಶಕುಂತಲಮ್ಮ, ಶೈಕ್ಷಣಿಕ ಸಲಹೆಗಾರ ಪ್ರೊ.ಸಿ.ವಿ. ಪಾಟೀಲ್, ಆಡಳಿತ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು.