ನವದೆಹಲಿ: ಪಾಕಿಸ್ತಾನವು ಈಗಾಗಲೇ ಕದನ ವಿರಾಮ ಉಲ್ಲಂಘನೆ ವೇಳೆ ಕ್ಷಿಪಣಿಗಳನ್ನು ಬಳಸುತ್ತಿದೆ, ಆದರೆ ಭಾರತ ಕ್ಷಿಪಣಿಗಳು ಗಣರಾಜ್ಯೋತ್ಸವದ ಪ್ರದರ್ಶನಕ್ಕೆ ಮಾತ್ರ ಮೀಸಲಾಗಿವೆಯೇ? ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಅವರು ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಪಾಕಿಸ್ತಾನ ಸೇನೆಯು ಭಾನುವಾರ ಭಾರತೀಯ ಸೇನೆ ಮೇಲೆ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್ ದಾಳಿ ನಡೆಸಿರುವುದನ್ನು ಖಂಡಿಸಿ ಅವರು ಮಾತನಾಡಿದ್ದಾರೆ.
ಪಾಕಿಸ್ತಾನ ಭಾರತೀಯರ ಮೇಲೆ ಆಕ್ರಮಣ ಮಾಡಲು ಕ್ಷಿಪಣಿಗಳನ್ನು ಬಳಸಿದೆ. ಆದರೆ ಭಾರತದ ಕ್ಷಿಪಣಿಗಳು ಏನಾದವು? ಅವು ಕೇವಲ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆಯುವ ರಾಜಪಥದಲ್ಲಿನ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿವೆಯೇ? ಅವು ಜನವರಿ 26ರಂದು ವಿದೇಶಿಯರಿಗೆ ತೋರಿಸುವುದಕ್ಕೆ ಮಾತ್ರವೇ ? ಎಂದು ಪ್ರಶ್ನಿಸಿದ್ದಾರೆ.
ಇದು ಕೇವಲ ಕದನ ಉಲ್ಲಂಘನೆಯ ಮಾತಲ್ಲ, ಇದು ನೇರ ದಾಳಿ, ನನ್ನ ಈ ಪ್ರಶ್ನೆಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಬೇಕು. ಅಕಸ್ಮಾತ್ ಇದಕ್ಕೆ ನೀವು ಉತ್ತರಿಸದಿದ್ದಲ್ಲಿ ಇದು ವಿಶ್ವದ ದುರ್ಬಲತೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
2019ರಲ್ಲಿ ನಡೆಯಲಿರುವ ಲೋಕಸಭೆ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಶಿವಸೇನೆ ನಿರ್ಧರಿಸಿದೆ.