ಮುಂಬೈ: ‘ವೇಗಿಗಳಾದ ಮಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಅವರನ್ನು ಮಾದರಿಯಾಗಿರಿಸಿಕೊಂಡು ಬೌಲಿಂಗ್ ಮಾಡಲು ಪ್ರಯತ್ನಿಸುತ್ತೇನೆ’ ಎಂದು ಭಾರತ 19 ವರ್ಷದೊಳಗಿನವರ ತಂಡದ ಬೌಲರ್ ಕಮಲೇಶ್ ನಾಗರಕೋಟಿ ಹೇಳಿದರು.
‘ಪಂದ್ಯಗಳಲ್ಲಿ ಸವಾಲಿನ ಕ್ಷಣ ಎದುರಾದಾಗ ಭುವಿ ಮತ್ತು ಶಮಿ ಅವರನ್ನು ನೆನಪಿಸಿಕೊಳ್ಳುತ್ತೇನೆ. ಸಂಕಷ್ಟದಲ್ಲಿ ಅವರು ಹೇಗೆ ಬೌಲಿಂಗ್ ಮಾಡಿದರು ಎಂಬುದನ್ನು ಆಧರಿಸಿ ನಾನು ಕೂಡ ಎದುರಾಳಿಯತ್ತ ದಾಳಿ ನಡೆಸುತ್ತೇನೆ’ ಎಂದು ನ್ಯೂಜಿಲೆಂಡ್ನಿಂದ ಮರಳಿದ ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು ತಿಳಿಸಿದರು.
ಭಾರತ ತಂಡ ವಿಶ್ವಕಪ್ ಗೆಲ್ಲುವಲ್ಲಿ ನಾಗರಕೋಟಿ ಮಹತ್ವದ ಪಾತ್ರ ವಹಿಸಿದ್ದರು. ಟೂರ್ನಿಯಲ್ಲಿ ಅವರು ಒಟ್ಟು ಒಂಬತ್ತು ವಿಕೆಟ್ ಕಬಳಿಸಿದ್ದರು. ಇದೀಗ ವಿಜಯ್ ಹಜಾರೆ ಟೂರ್ನಿ ಮತ್ತು ಐಪಿಎಲ್ನತ್ತ ಚಿತ್ತ ನೆಟ್ಟಿದ್ದಾರೆ.