ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ ನೋಂದಣಿ ಅವಧಿ ವಿಸ್ತರಣೆಗೆ ಆಗ್ರಹ

Last Updated 6 ಫೆಬ್ರುವರಿ 2018, 9:16 IST
ಅಕ್ಷರ ಗಾತ್ರ

ಬಳ್ಳಾರಿ: ‘ ತೊಗರಿ ನೋಂದಣಿ ಅವಧಿಯನ್ನು ಇನ್ನೂ ಒಂದು ತಿಂಗಳ ಕಾಲ ವಿಸ್ತರಿಸಬೇಕು’ ಎಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಆಗ್ರಹಿಸಿದರು.

‘ರೈತರ ನೋಂದಣಿಗಾಗಿ ಆರು ದಿನ ಅವಕಾಶ ನೀಡಲಾಗಿತ್ತು. ಆದರೆ, ಈ ಅವಧಿಯಲ್ಲಿ 702 ರೈತರಿಂದ 3500 ಎಕರ ತೊಗರಿ ಬೆಳೆಯನ್ನು ಮಾತ್ರ ಬೆಂಬಲ ಬೆಲೆ ನೀಡಿ ಖರೀದಿಸಲಾಗಿದೆ. ಕೆಲ ರೈತರು ಕ್ವಿಂಟಲ್‌ ಗೆ ₹ 6000 ಬೆಂಬಲ ಬೆಲೆಯ ಲಾಭಾಂಶ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ 92,000 ಎಕರೆಯಲ್ಲಿ ತೊಗರಿ ಬೆಳೆ ಬಿತ್ತನೆಯಾಗಿದೆ. ಅವಧಿ ವಿಸ್ತರಿಸದಿದ್ದರೆ ಉಳಿದ ರೈತರಿಗೆ ಅನ್ಯಾಯವಾಗಲಿದೆ. ಹಾಗಾಗಿ ಅವಧಿ ವಿಸ್ತರಣೆ ಮಾಡಬೇಕು’ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಜಿಲ್ಲೆಯ 1,13,267 ಎಕರೆಯಲ್ಲಿ ಜೋಳ ಹಾಗೂ 2,25,232 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಜೋಳಕ್ಕೆ ಕೇವಲ ₹ 1100 ರಿಂದ ₹ 1200ರ ವರೆಗೆ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಕನಿಷ್ಠ ₹ 2,000 ಅಗತ್ಯ ಬೆಂಬಲ ಬೆಲೆ ನಿಗದಿ ಮಾಡಬೇಕು’ ಎಂದು ಮನವಿ ಮಾಡಿದರು.

‘ಕಡಲೆ ಬೆಳೆಗೆ ₹ 4,400 ಬೆಂಬಲ ನಿಗದಿಪಡಿಸಿದೆಯಾದರೂ, ಈವರೆಗೂ ಖರೀದಿ ಕೇಂದ್ರ ಆರಂಭಿಸಲು ಜಿಲ್ಲಾಡಳಿತ ಮುಂದಾಗಿಲ್ಲ. ಕೂಡಲೇ ಖರೀದಿ ಕೇಂದ್ರ ಪ್ರಾರಂಭಿಸಬೇಕು’ ಎಂದು ಒತ್ತಾಯಿಸಿದರು.

‘ಎಲ್‌ಎಲ್‌ಸಿ ಕಾಲುವೆ ವ್ಯಾಪ್ತಿಯಲ್ಲಿ ಬರುವ 2.5 ಲಕ್ಷ ಎಕರೆಯಲ್ಲಿ ಭತ್ತ ಬೆಳೆಯಲಾಗಿದೆ. ಕಾಲುವೆಗೆ ಸಮರ್ಪಕ ನೀರು ಹರಿಸದರೆ ಮಾತ್ರ ಬೆಳೆ ಬರಲು ಸಾಧ್ಯ. ಹಾಗಾಗಿ ಮಾರ್ಚ್‌ 3ರ ವರೆಗೆ ನೀರನ್ನು ಹರಿಸಬೇಕು’ ಎಂದು ಆಗ್ರಹಿಸಿದರು.

‘ಸಿಂಧನೂರನಲ್ಲಿ ಇದೇ 6 ರಂದು ರಾಯಚೂರು, ಕೊಪ್ಪಳ, ಬಳ್ಳಾರಿ ಜನಪ್ರತಿನಿಧಿಗಳು, ರೈತ ಮುಖಂಡರ ಸಭೆ ಕರೆಯಲಾಗಿದೆ. ಅಲ್ಲಿ ತುಂಗಭದ್ರಾ ಜಲಾಶಯದ ಹೂಳಿನ ವಿಷಯ ಸೇರಿ ವಿವಿಧ ಸಮಸ್ಯೆ ಕುರಿತು ಚರ್ಚಿಸಲಾಗುವುದು’ ಎಂದು ತಿಳಿಸಿದರು. ಮುಖಂಡರಾದ ಎಸ್. ಶರಣಪ್ಪ, ಜೆ.ಶ್ರೀಧರ, ಡಿ.ಶಿವಯ್ಯ, ಟಿ.ರಂಜಾನಸಾಬ್, ಎಂ.ಭೀಮನಗೌಡ, ಮುದ್ದನಗೌಡ, ಮೃತ್ಯುಂಜಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT