ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಟ್ಯಾಗ್ ಮಾಡಿ, ಉತ್ತರಿಸುವ ಧೈರ್ಯ ತೋರಿ ಎಂದು ಮತ್ತಷ್ಟು ಪ್ರಶ್ನೆಗಳನ್ನು ಪ್ರಕಟಿಸಿದ್ದಾರೆ. ಉಭಯ ನಾಯಕರ ನಡುವಣ ಟ್ವೀಟ್ ಸಮರ ಬುಧವಾರವೂ ಮುಂದುವರಿಯಿತು.
ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪದಲ್ಲಿ ಮಾತನಾಡಿದ್ದ ಮೋದಿ, ‘ರಾಜ್ಯ ಸರ್ಕಾರ ಎಲ್ಲ ಯೋಜನೆಗಳಲ್ಲೂ ಶೇ 10ರಷ್ಟು ಕಮಿಷನ್ ಪಡೆಯುತ್ತಿದೆ’ ಎಂದು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಟ್ವಿಟರ್ ಸಮರ ಏರ್ಪಟ್ಟಿದೆ.
ಸಿದ್ದರಾಮಯ್ಯ ಅವರೇ ಸತ್ಯ ಒಪ್ಪಿಕೊಳ್ಳುವ ಧೈರ್ಯ ಮಾಡಿ ಎಂದು ಅನ್ನಭಾಗ್ಯ ಯೋಜನೆ ಕುರಿತ ಅಂಕಿ–ಅಂಶಗಳ ಪ್ರತಿ ಟ್ವೀಟಿಸಿರುವ ಯಡಿಯೂರಪ್ಪ, ‘ರಾಜ್ಯ ಸರ್ಕಾರ ಈ ಯೋಜನೆಗೆ ₹3 ಖರ್ಚು ಮಾಡಿದರೆ, ಪ್ರಧಾನಿ ಮೋದಿ ಅವರ ಸರ್ಕಾರ ₹29.64 ನೀಡುತ್ತಿದೆ. ಈ ಕುರಿತು ಚರ್ಚೆಗೆ ಸವಾಲು ಹಾಕುತ್ತಿದ್ದೇನೆ’ ಎಂದಿದ್ದಾರೆ.