ಬೈಲಹೊಂಗಲ: ದಾದಾಗಿರಿ ಮುಂದುವರೆಸಿದರೆ ಗಡಿಪಾರು ಮಾಡಬೇಕಾಗುತ್ತದೆ ಎಂಬ ಖಡಕ್ ಸಂದೇಶವನ್ನು ಉತ್ತರ ವಲಯದ ಐಜಿಪಿ ಅಲೋಕಕುಮಾರ ನೀಡಿದರು. ಪಟ್ಟಣದ ಡಿಎಸ್ಪಿ ಕಚೇರಿ ಆವರಣದಲ್ಲಿ ಮಂಗಳವಾರ ಬೈಲಹೊಂಗಲ ಉಪವಿಭಾಗ ವ್ಯಾಪ್ತಿಯ ರೌಡಿಗಳ ವಿಚಾರಣೆ ನಡೆಸಿದರು. ‘ಮತ್ತೇ ಕಾನೂನು ಕೈಗೆತ್ತಿಕೊಂಡು, ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದರೆ ನಿಮಗೆ ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು.
ಕಾನೂನು ಕೈಗೆತ್ತಿಕೊಂಡ ಹಾಗೂ ಅಶಾಂತಿಗೆ ಕಾರಣರಾಗುವವರನ್ನು ತಕ್ಷಣ ಬಂಧಿಸಿ ಅವರ ವಿರುದ್ದ ಕಠಿಣ ಕ್ರಮ ಕೈಕೊಳ್ಳಬೇಕು ಎಂದು ಪೊಲೀಸ್ರಿಗೆ ಸೂಚಿಸಿದರು.
ಒಮ್ಮೆ ನಿಮ್ಮ ವಿರುದ್ದ ಕೇಸ್ ಬಿದ್ದರೆ ಕೊನೆಯವರೆಗೂ ಅದು ನಿಮ್ಮನ್ನು ಬಿಡಲ್ಲ, ನಿಮಗೆ ಸರ್ಕಾರಿ ನೌಕರಿಯೂ ಸಿಗಲ್ಲ, ಶಾಂತಿಯಿಂದ ಇದ್ದು ನಿಮ್ಮ ಒಳ್ಳೆಯತನ ಬೆಳೆಸಿಕೊಳ್ಳಬೇಕು ಎಂದು ಸೂಚಿಸಿದರು.
ಪಂಡಿತ ಪ್ರಕಾಶ ಓಬಳೆ, ಭಾವುರಾಜ ಚವಾಣ, ಅಮೂನ್ ತಾನಾಜಿ ಪಾಟೀಲ ಹೆಸರುಗಳು ಯಾವಾಗಲೂ ನೆನಪಲ್ಲಿರುತ್ತದೆ. ಹುಷಾರಾಗಿರಬೇಕು, ಅವರ ಮಾಹಿತಿ ನೀಡಿ ಎಂದಾಗ ಖಾನಾಪುರ ಸಿಪಿಐ ತಬ್ಬಿಬ್ಬಾದರು.
ಬಾರ್ನಲ್ಲಿ ತಿಂದು ಕುಡಿದು ದುಡ್ಡು ಕೊಡದೇ ಹೋಗುವುದು, ದಾದಾಗಿರಿ ಮಾಡುವುದು. ಕಿತ್ತೂರಲ್ಲಿ ಜಿಮ್ ಮಾಡಿ ರೌಡಿಗಳನ್ನು ಸಾಕ್ತಿರೊದು ಎಲ್ಲಾ ಗೊತ್ತು, ತಪ್ಪು ಮಾಡಬಾರದು, ಮಾಡಿದ ತಪ್ಪಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ರೌಡಿ ಶೀಟರ್ಗಳನ್ನು ಸರಿಯಾಗಿ ಫರೇಡ್ ಮಾಡಿಸಬೇಕು, ಅಥಣಿಯಲ್ಲಿ ಫರೇಡ್ ಇದೆ. ನೀವೆಲ್ಲರೂ ಅಥಣಿಗೆ ಬರಬೇಕು ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ, ಪ್ರೊಬೇಶನರಿ ಎಸ್ಪಿ ಕ್ಷಮಾ ಮಿಶ್ರಾ, ಡಿಎಸ್ಪಿ ಜೆ.ಎಂ. ಕರುಣಾಕರಶಟ್ಟಿ, ಸಿಪಿಐ ಸಂಗನಗೌಡ ಇದ್ದರು.