ಶ್ರೀನಗರ: ಇಲ್ಲಿನ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದ ಲಷ್ಕರ್ ಎ ತಯ್ಯಿಬಾ ಕಮಾಂಡರ್, ಉಗ್ರ ನವೀದ್ ಜಟ್ ಅಲಿಯಾಸ್ ಅಬು ಹಂಜುಲ್ಲಾ ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದಲ್ಲಿ 10 ಜನರನ್ನು ಬಂಧಿಸಲಾಗಿದೆ.
ದಕ್ಷಿಣ ಕಾಶ್ಮೀರದ ವಿವಿಧೆಡೆಗಳಲ್ಲಿ ರಾತ್ರೋ ರಾತ್ರಿ ದಾಳಿ ನಡೆಸಿದ ವಿಶೇಷ ತನಿಖಾ ತಂಡವು ಆರೋಪಿಗಳನ್ನು ಬಂಧಿಸಿದೆ.
‘ಈ ಪ್ರಕರಣದಲ್ಲಿ ಶ್ರೀನಗರ ಕೇಂದ್ರ ಕಾರಾಗೃಹದ ಸಿಬ್ಬಂದಿಯ ಕೈವಾಡವಿರುವ ಅನುಮಾನವಿದೆ’ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಶೇಷಪಾಲ್ ವೈದ್ ಅವರು ಹೇಳಿದ್ದಾರೆ.
ಆಸ್ಪತ್ರೆಯ ಮೇಲೆ ಮಂಗಳವಾರ ದಾಳಿ ಮಾಡಿದ ಗುಂಪೊಂದು ನವೀದ್ನನ್ನು ಬಿಡಿಸಿಕೊಂಡು ನಡೆದಿತ್ತು. ಈ ವೇಳೆ ಇಬ್ಬರು ಪೊಲೀಸರು ಸಾವನ್ನಪ್ಪಿದ್ದರು. 2014ರ ಜೂನ್ನಲ್ಲಿ ನವೀದ್ನನ್ನು ಬಂಧಿಸಲಾಗಿತ್ತು.
‘ನವೀದ್ನನ್ನು ಬಿಡಿಸಿಕೊಂಡು ಬರಲು ಹೋದವರಲ್ಲಿ ಇಬ್ಬರು ಸುರಕ್ಷಿತವಾಗಿ ವಾಪಸಾಗಿದ್ದಾರೆ’ ಎಂಬ ಧ್ವನಿ ಸಂದೇಶವು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಜಾಲತಾಣದಲ್ಲಿ ನವೀದ್ ಚಿತ್ರ: ಪೊಲೀಸರ ವಶದಿಂದ ತಪ್ಪಿಸಿಕೊಂಡ ನವೀದ್ನ ಭಾವಚಿತ್ರವು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಈ ಚಿತ್ರದಲ್ಲಿ, ಇಬ್ಬರು ಸಹಚರರೊಂದಿಗೆ ಇರುವ ನವೀದ್ ಎಕೆ47 ಬಂದೂಕನ್ನು ಹಿಡಿದಿದ್ದಾನೆ.