ಹಾಸನ: ‘ಮಠ–ಮಾನ್ಯಗಳ ವಿಚಾರದಲ್ಲಿ ಸಿದ್ದರಾಮಯ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಮಠಗಳಿಗೆ ಕಡಿವಾಣ ಹಾಕಲು ಮುಂದಾದರು, ಎಲ್ಲರೂ ತಿರುಗಿ ಬಿದ್ದ ಮೇಲೆ ಈಗ ತೆಪ್ಪಗಾಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸಕಲೇಶಪುರದಲ್ಲಿ ಶುಕ್ರವಾರ ನಡೆದ ಪಕ್ಷದ ಎರಡನೇ ಹಂತದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಜೆಡಿಎಸ್–ಬಿಎಸ್ಪಿ ಮೈತ್ರಿಯಿಂದ ನಮಗೆ ಲಾಭವೇ ಆಗಲಿದೆ. ಬೇರೆ ಪಕ್ಷಗಳ ಹೊಂದಾಣಿಕೆ ನಮಗೆ ಅಡ್ಡಿಯಾಗದು. ಇಂಥ ಮೈತ್ರಿಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ನಾವು 150 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಮುಟ್ಟುತ್ತೇವೆ’ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
‘ರಾಜ್ಯಕ್ಕೆ ರಾಹುಲ್ ಗಾಂಧಿ ಬಂದರೆ ನಮಗೇ ಲಾಭವಾಗಲಿದೆ. ಅವರು ಹೋದ ಕಡೆಯೆಲ್ಲಾ ನಾನೂ ಹೋಗುವೆ’ ಎಂದರು.