ನವದೆಹಲಿ: ಅನಧಿಕೃತವಾಗಿ ದೀರ್ಘ ರಜೆ ಹಾಕಿದ ಹಾಗೂ ಕೆಲಸಕ್ಕೆ ಗೈರುಹಾಜರಾದ 13 ಸಾವಿರಕ್ಕೂ ಹೆಚ್ಚು ನೌಕರರ ಮೇಲೆ ಶಿಸ್ತುಕ್ರಮ ಜರುಗಿಸಲು ರೈಲ್ವೆ ಇಲಾಖೆ ಮುಂದಾಗಿದೆ.
ರೈಲ್ವೆ ಸಚಿವ ಪಿಯೂಷ್ ಗೊಯಲ್ ಇತ್ತೀಚೆಗೆ ರೈಲ್ವೆಯ ವಿವಿಧ ವಿಭಾಗಗಳಲ್ಲಿ ದೀರ್ಘ ರಜೆ ಹಾಕಿದವರ ಪಟ್ಟಿ ನೀಡಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು.
ಅಧಿಕಾರಿಗಳು ನಡೆಸಿದ ಪರಿಶೀಲನಾ ಅಭಿಯಾನದಿಂದ ರೈಲ್ವೆಯಲ್ಲಿನ 13 ಲಕ್ಷ ನೌಕರರಲ್ಲಿ 13 ಸಾವಿರಕ್ಕೂ ಹೆಚ್ಚು ನೌಕರರು ದೀರ್ಘಕಾಲದವರೆಗೆ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರುಹಾಜರಾಗಿರುವುದು ತಿಳಿದಿದೆ. ಸೇವಾ ನಿಯಮಗಳ ಅನ್ವಯ ಆ ನೌಕರರ ಮೇಲೆ ಕ್ರಮ ಜರುಗಿಸಲು ಇಲಾಖೆ ನಿರ್ಧರಿಸಿದೆ.
‘ಸೇವಾ ನಿಯಮಗಳನ್ನು ಅನುಸರಿಸಿ ಈ ನೌಕರರನ್ನು ಸೇವೆಯಿಂದ ಕಿತ್ತುಹಾಕಲು ಇಲಾಖೆಯ ಆಯಾ ವಿಭಾಗಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ’ ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.