ಮೈಸೂರು: ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್ಎಸ್ಯುಐ) ಕಾರ್ಯಕರ್ತರು ಸಂಸದ ಪ್ರತಾಪ ಸಿಂಹ ಅವರ ಕಚೇರಿ ಎದುರು ಪಕೋಡಾ ತಯಾರಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಅಧಿಕಾರಕ್ಕೆ ಬಂದರೆ ಉದ್ಯೋಗ ಸೃಷ್ಟಿಸುವುದಾಗಿ 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಭರವಸೆ ನೀಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜನರು, ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದರು. ಆದರೆ, ನಾಲ್ಕು ವರ್ಷ ಕಳೆದರೂ ಇನ್ನೂ ಭರವಸೆ ಈಡೇರಿಸಿಲ್ಲ ಎಂದು ಆರೋಪಿಸಿದರು.
ಉದ್ಯೋಗ ಸೃಷ್ಟಿಸದ ಬಿಜೆಪಿ ವಿರುದ್ಧ ದೇಶದ ಯುವ ಸಮೂಹ ಅಸಮಾಧಾನಗೊಂಡಿದೆ. ಹೀಗಾಗಿ, ಪಕೋಡಾ ಮಾಡುವುದು ಉದ್ಯೋಗ ಎಂದು ನಂಬಿಸಲು ಸರ್ಕಾರ ಯತ್ನಿಸಲು ಮುಂದಾಗಿದೆ. ಸ್ವಾಭಿಮಾನದಿಂದ ಅನೇಕರು ಈ ವೃತ್ತಿ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ.
ಈ ವೃತ್ತಿಗೆ ಯಾವ ಬ್ಯಾಂಕಿನಿಂದ ಸಾಲ ಕೊಡುತ್ತೀರಿ ಎಂದು ಪ್ರಶ್ನಿಸಿದರು. ಎನ್ಎಸ್ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯಕ, ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಅಬ್ರಾರ್, ಪ್ರಧಾನ ಕಾರ್ಯದರ್ಶಿ ಪುಟ್ಟೇಗೌಡ, ವಿಶ್ವನಾಥ್ ಇದ್ದರು.