ಬೆಂಗಳೂರು: ಮಹದೇವಪುರ ಮೆಟ್ರೊ ನಿಲ್ದಾಣದ ಕಾಮಗಾರಿ ಸ್ಥಳದಲ್ಲಿ ಶುಕ್ರವಾರ ರಾತ್ರಿ ವಿದ್ಯುತ್ ತಂತಿ ತಗುಲಿದ್ದರಿಂದ ಕಾರ್ಮಿಕ ರವಿ ಮುರ್ಮು (21) ಮೃತಪಟ್ಟಿದ್ದಾರೆ.
ಇನ್ನೊಬ್ಬ ಕಾರ್ಮಿಕ ಗೌರಂಗ್ ಗೌನಿಯಾ (23) ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಫಿಟ್ಟರ್ ಕೆಲಸಕ್ಕಾಗಿ ಪಶ್ಚಿಮ ಬಂಗಾಳದ ಕಾರ್ಮಿಕರನ್ನು ಗುತ್ತಿಗೆದಾರ ಸಮರ್ ಬಿಸ್ವಾಸ್ ನೇಮಿಸಿಕೊಂಡಿದ್ದರು. ರಾತ್ರಿ 10.45 ಗಂಟೆ ಸುಮಾರಿಗೆ ಮಳೆ ಸುರಿಯುತ್ತಿದ್ದ ವೇಳೆಯೇ ಕಾಮಗಾರಿ ಸಾಮಗ್ರಿಗಳನ್ನು ಕ್ರೇನ್ ಮೂಲಕ ಸ್ಥಳಾಂತರಿಸಲಾಗುತ್ತಿತ್ತು.
ಕ್ರೇನ್ಗೆ ವಿದ್ಯುತ್ ಪೂರೈಕೆ ಮಾಡುವ 11 ಕೆ.ವಿ ಸಾಮರ್ಥ್ಯದ ತಂತಿಯು ಇಬ್ಬರೂ ಕಾರ್ಮಿಕರಿಗೆ ತಾಗಿತ್ತು. ಸ್ಥಳದಲ್ಲೇ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು, ಮಾರ್ಗಮಧ್ಯೆಯೇ ರವಿ ಅಸುನೀಗಿರುವುದಾಗಿ ಹೇಳಿದರು.
‘ಕೆಲಸದ ಸ್ಥಳದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳದಿದ್ದರಿಂದ ಈ ಅವಘಡ ಸಂಭವಿಸಿದೆ. ಮೃತರ ಸಂಬಂಧಿಕರ ದೂರಿನನ್ವಯ ಎಫ್ಐಆರ್ ದಾಖಲಿಸಿಕೊಂಡಿದ್ದೇವೆ’ ಎಂದು ಮಹದೇವಪುರ ಪೊಲೀಸರು ತಿಳಿಸಿದರು.