ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿಟ್ರ್ಯಾ‍ಪ್: ಪತಿ ಸೆರೆ, ಪತ್ನಿ ಪರಾರಿ

Last Updated 10 ಫೆಬ್ರುವರಿ 2018, 20:03 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾನೈಟ್ ಯಂತ್ರಗಳ ಸರ್ವಿಸ್ ಸೆಂಟರ್ ಮಾಲೀಕನನ್ನು ‘ಹನಿಟ್ರ್ಯಾಪ್’ ಜಾಲದಲ್ಲಿ ಸಿಕ್ಕಿಸಿ, ₹ 80 ಸಾವಿರ ಸುಲಿಗೆ ಮಾಡಿದ್ದ ಮಂಜುನಾಥ್ (28) ಎಂಬಾತ ಅಮೃತಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕನಕನಗರ ನಿವಾಸಿಯಾದ ಮಂಜುನಾಥ್, ಪತ್ನಿ ಆಯೇಷಾ ಅಲಿಯಾಸ್ ಮೋನಿಕಾ (22) ಜತೆ ಸೇರಿ ಪ್ಯಾಲೇಸ್ ಗುಟ್ಟಹಳ್ಳಿಯ ವ್ಯಕ್ತಿಯೊಬ್ಬರಿಂದ ಸುಲಿಗೆ ಮಾಡಿದ್ದ. ಫೆ.5ರಂದು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಆಯೇಷಾ ತಲೆಮರೆಸಿಕೊಂಡಿ
ದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

‘ಮೂರು ವರ್ಷಗಳ ಹಿಂದೆ ಜಯಮಹಲ್ ರಸ್ತೆಯಲ್ಲಿ ನನ್ನನ್ನು ಭೇಟಿಯಾಗಿದ್ದ ಯುವತಿಯೊಬ್ಬಳು, ‘ನನ್ನ ಹೆಸರು ಆಯೇಷಾ. ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆ ನೆರವು ನೀಡಿ’ ಎಂದು ಕೇಳಿಕೊಂಡಿದ್ದಳು. ಮಾನವೀಯತೆ ದೃಷ್ಟಿಯಿಂದ ಆಕೆಗೆ ₹ 2,000 ನಗದು ಹಾಗೂ ಮೊಬೈಲ್ ಸಂಖ್ಯೆ ಕೊಟ್ಟಿದ್ದೆ’ ಎಂದು ಫಿರ್ಯಾದಿ ದೂರಿನಲ್ಲಿ ವಿವರಿಸಿದ್ದರು.

‘ಕೆಲ ದಿನಗಳ ನಂತರ ಕರೆ ಮಾಡಿ, ಮಕ್ಕಳ ಶಿಕ್ಷಣಕ್ಕೆ ನೆರವಾಗುವಂತೆ ಮನವಿ ಮಾಡಿದ್ದಳು. ಆಗಲೂ ಸರ್ವಿಸ್ ಸೆಂಟರ್ ಬಳಿ ಕರೆಸಿಕೊಂಡು ₹ 5,000 ಕೊಟ್ಟು ಕಳುಹಿಸಿದ್ದೆ. ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ, ಇನ್ನು ಮುಂದೆ ಕರೆ ಮಾಡದಂತೆ ಎಚ್ಚರಿಸಿದ್ದೆ. ಆ ನಂತರ ನಮ್ಮಿಬ್ಬರ ಸಂಪರ್ಕ ಕಡಿತವಾಗಿತ್ತು’

‘ಆದರೆ, 2017ರ ಡಿ.25ರಂದು ಪುನಃ ಕರೆ ಮಾಡಿದ ಆಯೇಷಾ, ‘ನನ್ನೊಂದಿಗೆ ದೈಹಿಕ ಸಂಪರ್ಕ ನಡೆಸಿಯಾದರೂ ಹಣ ಕೊಡಿ’ ಎಂದು ಹೇಳಿ
ದಳು. ಆ ದಿನ ಪತ್ನಿ–ಮಕ್ಕಳು ಊರಿಗೆ ಹೋಗಿದ್ದರಿಂದ ಮನೆಗೇ ಬರುವಂತೆ ಸೂಚಿಸಿದ್ದೆ. ಅಂತೆಯೇ ಮಧ್ಯಾಹ್ನ 2.30ರ ಸುಮಾರಿಗೆ ಆಯೇಷಾ ಬಂದಳು.’

‘ಸ್ವಲ್ಪ ಹೊತ್ತಿನಲ್ಲೇ ಮನೆಗೆ ನುಗ್ಗಿದ ಮಂಜುನಾಥ್ ಎಂಬಾತ, ‘ನನ್ನ ಹೆಂಡತಿಯನ್ನು ಕರೆದುಕೊಂಡು ಇಂಥ ಕೆಲಸ ಮಾಡುತ್ತಿದ್ದೀಯಾ. ₹ 2 ಲಕ್ಷ
ಕೊಡದಿದ್ದರೆ ಅಕ್ಕ–ಪಕ್ಕದ ಮನೆಯವರನ್ನು ಕರೆಸಿ ನಿನ್ನ ಮರ್ಯಾದೆ ತೆಗೆಯುತ್ತೇನೆ’ ಎಂದು ಹೆದರಿಸಿದ. ಕೊನೆಗೆ ₹ 80 ಸಾವಿರ ಕೊಟ್ಟು ಕಳುಹಿಸಿದ್ದೆ.’

‘ದಂಪತಿ ಈಗ ಮತ್ತೆ ₹ 80 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ, ಲೈಂಗಿಕ ಕ್ರಿಯೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡುವುದಾಗಿ ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದಾರೆ. ಹೀಗಾಗಿ, ಆರೋಪಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಕೋರಿದ್ದರು.

ಸುಲಿಗೆ (ಐಪಿಸಿ 384) ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಅಮೃತಹಳ್ಳಿ ಪೊಲೀಸರು, ಫೆ.5ರ ಸಂಜೆ ಫಿರ್ಯಾದಿಯಿಂದಲೇ ಮಂಜುನಾಥ್‌ಗೆ ಕರೆ ಮಾಡಿಸಿದ್ದರು. ಆಗ ಆತ,‌ ಹಣ ತೆಗೆದುಕೊಂಡು ಹೆಬ್ಬಾಳ ಮೇಲ್ಸೇತುವೆ ಬಳಿ ಬರುವಂತೆ ತಿಳಿಸಿದ್ದ. ಕೂಡಲೇ ಮಫ್ತಿಯಲ್ಲಿ ಸ್ಥಳಕ್ಕೆ ತೆರಳಿದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪತಿಯ ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಆಯೇಷಾ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾಳೆ.

ಸುಲಭ ಸಂಪಾದನೆಗೆ ಅಡ್ಡದಾರಿ

‘ನಾನು ಗಾರೆ ಕೆಲಸ ಮಾಡುತ್ತೇನೆ. ಮೊದಲ ಪತ್ನಿ ಮೃತಪಟ್ಟ ನಂತರ, ಆಯೇಷಾಳನ್ನು ಪ್ರೀತಿಸಿ ಮದುವೆಯಾದೆ. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಇಬ್ಬರೂ ಸಂಚು ರೂಪಿಸಿ ಆ ವ್ಯಕ್ತಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದೆವು’ ಎಂದು ಮಂಜುನಾಥ್ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT