ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡೇಶ್ವರಿನಗರ ಗುಡಿಸಲು ಮುಕ್ತ ಶೀಘ್ರ

ಕೊಳೆಗೇರಿಯಲ್ಲಿ ವಾಸ್ತವ್ಯ ಹೂಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಭರವಸೆ
Last Updated 11 ಫೆಬ್ರುವರಿ 2018, 10:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಚಾಮುಂಡೇಶ್ವರಿ ನಗರದಲ್ಲಿ ಎಲ್ಲ ಮೂಲ ಸೌಕರ್ಯಗಳಿದ್ದು, ಶೀಘ್ರದಲ್ಲಿಯೇ ಈ ಕೊಳೆಗೇರಿಯನ್ನು ಗುಡಿಸಲು ಮುಕ್ತ ಪ್ರದೇಶವನ್ನಾಗಿಸಲಾಗುವುದು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಭರವಸೆ ನೀಡಿದರು.

ಮಹಾನಗರ ಪಾಲಿಕೆಯ 28ನೇ ವಾರ್ಡ್‌ ವ್ಯಾಪ್ತಿಯಲ್ಲಿ ಬರುವ ಚಾಮುಂಡೇಶ್ವರಿ ನಗರದ ಕೊಳೆಗೇರಿಯಲ್ಲಿ ಶನಿವಾರ ರಾತ್ರಿ ವೆಂಕಟೇಶ ಗುತ್ತಿಯವರ ಮನೆಯಲ್ಲಿ ವಾಸ್ತವ್ಯ ಹೂಡುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಈ ಕೊಳೆಗೇರಿಗೆ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಈಗಾಗಲೇ 80 ಮನೆಗಳು ಮಂಜೂರಾಗಿವೆ. ₹48 ಸಾವಿರ ಪಾವತಿಸಿದರೆ, ₹5ಲಕ್ಷ ವೆಚ್ಚದ ಮನೆ ನಿರ್ಮಿಸಿಕೊಡಲಾಗುತ್ತಿದೆ’ ಎಂದು ಅವರು ಹೇಳಿದರು.

‘ಕೊಳೆಗೇರಿಯಲ್ಲಿನ ಜನರ ಸುಖ–ದುಃಖ ಆಲಿಸುವ ಉದ್ದೇಶದಿಂದ ಬಿಜೆಪಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ನಮ್ಮ ಪಕ್ಷದ ನಾಯಕರು ಪ್ರಮುಖ ನಗರಗಳಲ್ಲಿನ ಕೊಳೆಗೇರಿಯಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ’ ಎಂದು ಶೆಟ್ಟರ್‌ ಹೇಳಿದರು.

ವರದಿ ಬಿಡುಗಡೆ ಇಂದು: ‘ರಾಜ್ಯದ ನಗರ ಪ್ರದೇಶಗಳಲ್ಲಿ 2,800 ಕೊಳೆಗೇರಿಗಳಿವೆ. ಈ ಪೈಕಿ 1,000 ಕೊಳೆಗೇರಿಗಳಿಗೆ ಭೇಟಿ ನೀಡಿರುವ ಬಿಜೆಪಿ ಕಾರ್ಯಕರ್ತರು, ಅಲ್ಲಿನ ಸಮಸ್ಯೆ, ಬೇಕು–ಬೇಡಗಳ ಬಗ್ಗೆ ಸಮೀಕ್ಷೆ ಮಾಡಿ ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು ಭಾನುವಾರ ಬೆಳಿಗ್ಗೆ ಬಿಡುಗಡೆ ಮಾಡಲಾಗುವುದು’ ಎಂದು ಶೆಟ್ಟರ್‌ ತಿಳಿಸಿದರು.

‘ಚುನಾವಣೆ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಚುನಾವಣೆ ನಂತರವೂ ಕೊಳೆಗೇರಿಗೆ ಭೇಟಿ ನೀಡುವ ಕೆಲಸ ಮುಂದುವರಿಸಲಾಗುವುದು. ನಾನು 1994ರಿಂದ ಸತತವಾಗಿ ಈ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ನಾನು ಈ ಪ್ರದೇಶಕ್ಕೆ ಬಂದಿದ್ದರೆ, ಇಲ್ಲಿನ ಜನ ನನ್ನನ್ನು ಒಳಗೆ ಬಿಟ್ಟುಕೊಳ್ಳುತ್ತಲೇ ಇರಲಿಲ್ಲ’ ಎಂದು ಅವರು ಹೇಳಿದರು.

ರಾತ್ರಿ 9.30ರ ವೇಳೆಗೆ ಚಾಮುಂಡೇಶ್ವರಿ ನಗರಕ್ಕೆ ಬಂದ ಶೆಟ್ಟರ್‌ ಅವರನ್ನು ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ನಂತರ, ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಿವಾಸಿಗಳೊಂದಿಗೆ ಕುಳಿತು ಅಹವಾಲು ಆಲಿಸಿದರು. ಮಂಜು ಎಸ್. ಅಂತರಗಂಗ ಎಂಬುವರ ಮನೆಯಲ್ಲಿ ಟೀ ಕುಡಿದ ಶೆಟ್ಟರ್‌, ಶ್ರೀರಾಮ ಕೊಂಡಪಲ್ಲಿ ಎಂಬುವರ ಮನೆಯಲ್ಲಿ ಊಟ ಮಾಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಬಿಜೆಪಿ ಮುಖಂಡರಾದ ಮಹೇಶ ಟೆಂಗಿನಕಾಯಿ, ತಿಪ್ಪಣ್ಣ ಮಜ್ಜಗಿ, ಸಿದ್ದು ಮೊಗಲಿಶೆಟ್ಟರ್, ವೀರೇಶ ಸಂಗಳದ, ಶಂಕರಣ್ಣ ಬಿಜವಾಡ ಇದ್ದರು.

11 ಪೊಲೀಸರ ನಿಯೋಜನೆ: ಜಗದೀಶ ಶೆಟ್ಟರ್‌ ಅವರ ಭದ್ರತೆಗೆ 11 ಪೊಲೀಸರನ್ನು ನಿಯೋಜಿಸಲಾಗಿತ್ತು. ಅಶೋಕನಗರ ಠಾಣೆಯಿಂದ ಇಬ್ಬರು, ನಗರ ಸಶಸ್ತ್ರಪಡೆಯ 9 ಪೊಲೀಸರು ನಿಯೋಜನೆಗೊಂಡಿದ್ದರು.
**
‘ಹಕ್ಕುಪತ್ರ ನೋಂದಣಿಯಾಗಲಿ’

‘ಕೊಳೆಗೇರಿಯಲ್ಲಿ ವಾಸಿಸುವವರಿಗೆ ಮೂಲಸೌಕರ್ಯ ನೀಡುವ ಕೆಲಸವಾಗಬೇಕು. ಬಡವರಿಗೆ ಸೂರು, ಸೈಟು ಕೊಡುವ ಕೆಲಸವಾಗ
ದಿದ್ದಾಗ, ಅವರೇ ಸರ್ಕಾರದ ಜಾಗದಲ್ಲಿ ಗುಡಿಸಲು ಕಟ್ಟಿಸಿಕೊಂಡಿದ್ದಾರೆ. ಈ ಜನರಿಗೆ ಹಕ್ಕುಪತ್ರ ನೀಡಬೇಕು. ಅಲ್ಲದೆ, ಆ ಆಸ್ತಿ ಫಲಾನುಭವಿಗಳ
ಹೆಸರಿಗೆ ನೋಂದಣಿ ಮಾಡುವ ಕೆಲಸವಾಗಬೇಕು’ ಎಂದು ಜಗದೀಶ ಶೆಟ್ಟರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT