ಕೊರಟಗೆರೆ: ತಾಲ್ಲೂಕಿನ ಹುಲಿಕುಂಟೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ 20 ವಿದ್ಯಾರ್ಥಿನಿಯರು ಭಾನುವಾರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿದ್ಯಾರ್ಥಿನಿಯರು ಬೆಳಿಗ್ಗೆ ಪುಳಿಯೊಗರೆ ತಿಂಡಿ ಸೇವಿಸಿದ್ದರು. ಬಳಿಕ ಹೊಟ್ಟೆನೋವು, ವಾಂತಿ, ತಲೆಸುತ್ತು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಕಳೆದ ಶುಕ್ರವಾರವೂ ಬೆಳಿಗ್ಗೆ ಪುಳಿಯೊಗರೆ ಸೇವಿಸಿದ ವಿದ್ಯಾರ್ಥಿನಿಯರಲ್ಲಿ ಇದೇ ರೀತಿ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಅಂದೂ ಕೂಡ ಚಿಕಿತ್ಸೆ ಕೊಡಿಸಲಾಗಿತ್ತು ಎಂದು ತಿಳಿದಿದೆ.
’ಕಲುಷಿತ ನೀರು ಸೇವನೆಯಿಂದ ಈ ರೀತಿ ತೊಂದರೆಯಾಗಿದೆ. ಆದಾಗ್ಯೂ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಕೂಡಲೇ ಹೊಸ ನೀರು ಶುದ್ಧೀಕರಣ ಯಂತ್ರ ಅಳವಡಿಸಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ದೇವರಾಜು ಹೇಳಿದರು.
ವೈದ್ಯಾಧಿಕಾರಿ ಹೇಳಿಕೆ
’ಮಕ್ಕಳು ಸೇವಿಸಿದ ಆಹಾರ ಮತ್ತು ವಸತಿ ನಿಲಯದಲ್ಲಿ ಕುಡಿಯಲು ಪೂರೈಸುವ ನೀರು ಹಾಗೂ ವಾಂತಿಯ ಮಾದರಿಯನ್ನು (ಸ್ಯಾಂಪಲ್) ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ವಿ.ರಂಗಸ್ವಾಮಿ ’ಪ್ರಜಾವಾಣಿ’ಗೆತಿಳಿಸಿದರು.