ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌ ಕೇವಲ ಮೂರು ದಿನಗಳಲ್ಲಿ ’ಸೇನೆ’ ಸಜ್ಜುಗೊಳಿಸಬಲ್ಲದು: ಮೋಹನ್ ಭಾಗವತ್

Last Updated 12 ಫೆಬ್ರುವರಿ 2018, 10:12 IST
ಅಕ್ಷರ ಗಾತ್ರ

ನವದೆಹಲಿ: ಅಗತ್ಯವಿದ್ದಲ್ಲಿ ಕೇವಲ ಮೂರು ದಿನಗಳಲ್ಲಿ ’ಸೇನೆ’ ಸಜ್ಜುಗೊಳಿಸಬಲ್ಲ ಸಾಮರ್ಥ್ಯವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌) ಹೊಂದಿದೆ ಎಂದು ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

10 ದಿನಗಳ ಬಿಹಾರ ಪ್ರವಾಸದಲ್ಲಿರುವ ಭಾಗವತ್‌, ಇಲ್ಲಿನ ಮುಜಾಫಿರ್‌ ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು.

‘ಭಾರತೀಯ ಸೇನೆ ಸೇನಾ ಸಿಬ್ಬಂದಿಯನ್ನು ಸಿದ್ಧಗೊಳಿಸಲು 6–7 ತಿಂಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಈ ಕೆಲಸವನ್ನು ಆರ್‌ಎಸ್‌ಎಸ್‌ ಕೇವಲ ಮೂರು ದಿನಗಳಲ್ಲಿ ಮಾಡಬಲ್ಲದು. ಇದು ನಮ್ಮ ಸಾಮರ್ಥ್ಯ. ದೇಶಕ್ಕೆ ಕಠಿಣ ಪರಿಸ್ಥಿತಿ ಎದುರಾಗಾದ ಸಂವಿಧಾನವು ಅವಕಾಶ ಕಲ್ಪಿಸಿದಲ್ಲಿ ಸ್ವಯಂ ಸೇವಕರು ಮುಂದೆ ನಿಂತು ಹೋರಾಟ ನಡೆಸಬಲ್ಲರು’ ಎಂದಿದ್ದಾರೆ.

ನಮ್ಮದು ಸೇನೆ ಅಥವಾ ಅರೆ ಸೇನಾ ಪಡೆಯಲ್ಲ ಎಂದು ಹೇಳಿರುವ ಅವರು, ‘ನಮ್ಮದು ಪರಿವಾರದ ಸಂಘಟನೆ. ಸೇನೆಯಲ್ಲಿರುವ ಶಿಸ್ತು ನಮ್ಮಲ್ಲಿದೆ ಮತ್ತು ಸೇನೆಯಂತೆಯೇ ಸನ್ನದ್ಧರಾಗಿದ್ದೇವೆ. ತುರ್ತು ಸಂದರ್ಭಗಳಲ್ಲಿ ದೇಶಕ್ಕಾಗಿ ಸಂತಸದಿಂದ ಪ್ರಾಣ ತ್ಯಾಗ ಮಾಡಲು ಆರ್‌ಎಸ್‌ಎಸ್‌ ಸ್ವಯಂ ಸೇವಕರು ಸಿದ್ಧರಿದ್ದಾರೆ’ ಎಂದಿದ್ದಾರೆ.

‘ಭಾರತ ಶಕ್ತಿಶಾಲಿ ಹಿಂದೂ ರಾಷ್ಟ್ರವಾಗುವ ದಿನ ಆರ್‌ಎಸ್‌ಎಸ್‌ನ ಅವಶ್ಯಕತೆ ಇರುವುದಿಲ್ಲ. ನಂತರ ಸಂಘದ ಸದಸ್ಯರು ಸಾಮಾನ್ಯ ಸಭೆಗಳನ್ನು ನಡೆಸಲಿದ್ದಾರೆ. ಪ್ರತಿದಿನ ನಡೆಯುವ ಶಾಖೆಗಳಿಗೆ ಪ್ರತಿಯೊಬ್ಬ ಭಾರತೀಯನೂ ಹಾಜರಾಗಬೇಕು. ಪ್ರತಿದಿನ ಸಾಧ್ಯವಾಗದಿದ್ದರೆ ತಿಂಗಳಿಗೆ ಒಮ್ಮೆಯಾದರೂ ಭಾಗವಹಿಸಹುದು. ಹೆಚ್ಚಿನ ಸಮಯವಿದ್ದರೆ ಸಂಘಟನೆಯ ಆರು ಮೂಲಭೂತ ತತ್ವಗಳನ್ನು ಅನುಸರಿಸಬಹುದು’ ಎಂದು ಹೇಳಿದರು. 

ಈ ಹೇಳಿಕೆಗೆ ಬಿಹಾರ ವಿರೋಧ ಪಕ್ಷ ರಾಷ್ಟ್ರೀಯ ಜನತಾ ದಳ ಆಕ್ಷೇಪ ವ್ಯಕ್ತಪಡಿಸಿದೆ. ‘ದೇಶಕ್ಕಾಗಿ ಅಪಾರ ತ್ಯಾಗಗಳನ್ನು ಮಾಡಿರುವ ಭಾರತೀಯ ಸೇನೆ ಅತ್ಯಂತ ಗೌರವಯುತವಾದುದ್ದು. ಆದರೆ ಆರ್‌ಎಸ್‌ಎಸ್‌ ಸಾಮರ್ಥ್ಯ ಹೆಚ್ಚು ಎನ್ನುವ ಮೂಲಕ ಸೇನೆಯ ಸಾಮರ್ಥ್ಯವನ್ನು ಭಾಗವತ್‌ ಅಲ್ಲಗಳೆದಿದ್ದಾರೆ. ತಕ್ಷಣೆವೇ ತಮ್ಮ ಮಾತಿಗೆ ಕ್ಷಮೆಯಾಚಿಸಬೇಕು’ ಎಂದು ಪಕ್ಷದ ವಕ್ತಾರ ಮೃತ್ಯಂಜಯ ತಿವಾರಿ ಆಗ್ರಹಿಸಿದ್ದಾರೆ.

ಭಾಗವತ್‌ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲೂ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, #ApologiseRSS ಹ್ಯಾಷ್‌ ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT