ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿಯಿಂದ ಮಾತ್ರ ಪಾರದರ್ಶಕ ಆಡಳಿತ’

Last Updated 12 ಫೆಬ್ರುವರಿ 2018, 6:31 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದಲ್ಲಿ ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ವ್ಯವಸ್ಥೆಯೊಂದನ್ನು ತರಬೇಕಾದರೆ ಮುಂದಿನ ಚುನಾವಣೆಯಲ್ಲಿ
ಕರ್ನಾಟಕ ದಲ್ಲಿರುವ ಮಲಯಾಳಿ ಭಾಷಿಕರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ವಿ. ಮುರಳೀಧರನ್‌ ಹೇಳಿದರು.

ಬಿಜೆಪಿ ಮಲಯಾಳಿ ಸೆಲ್ ಕರ್ನಾಟಕ, ಮಂಗಳೂರು ನಗರ ದಕ್ಷಿಣ ವಿಧಾನಸಭ ಕ್ಷೇತ್ರ ವತಿಯಿಂದ ನಗರದ ಟಿ.ವಿ. ರಮಣ ಪೈ ಸಭಾಗಣದಲ್ಲಿ ಭಾನುವಾರ ನಡೆದ `ಸಂಗಮಂ -2018' ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಬಹಳ ಮಹತ್ವದ್ದಾಗಿದ್ದು, ಅದು ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಆಗಲಿದೆ. ಆದ್ದರಿಂದಲೇ ದೇಶದ ಎಲ್ಲ ರಾಜ್ಯಗಳು ಕರ್ನಾಟಕದ ಚುನಾವಣೆಯತ್ತ ದೃಷ್ಟಿ ನೆಟ್ಟಿವೆ. ಇದರ ಪರಿಣಾಮ ಬಹಳ ದೀರ್ಘವಾದುದು ಎಂದು ಅವರು ಹೇಳಿದರು.

‘ಭಾರತೀಯ ಜನಸಂಘದ ಅಧ್ಯಕ್ಷ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ನಿಧನರಾಗಿ 50 ವರ್ಷ ಆಗಿದೆ. ಬಿಜೆಪಿ ಪಕ್ಷಕ್ಕೆ ಅವರು ಭದ್ರ ಬುನಾದಿ ಹಾಕಿದ್ದರು. 50 ವರ್ಷಗಳ ಹಿಂದೆ ಅವರು ಮಾಡಿದ ತ್ಯಾಗದಿಂದ ಬಿಜೆಪಿ ಇಂದು ವಿಶ್ವದ ಅತಿ ದೊಡ್ಡ ಪಕ್ಷವಾಗಿದೆ. ಅವರ ರಾಷ್ಟ್ರ ನಿರ್ಮಾಣದ ಕನಸು ಇಂದು ನರೇಂದ್ರ ಮೋದಿಯವರ ಮೂಲಕ ಈಡೇರುತ್ತಿದೆ’ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಮಲಯಾಳಿ ಸೆಲ್ ಕರ್ನಾಟಕ ಸಂಚಾಲಕ ಗೋಪಿನಾಥ್ ವೆನ್ನೇರಿ, ‘ಕರ್ನಾಟಕದ ಸುಮಾರು 50 ಕ್ಷೇತ್ರಗಳಲ್ಲಿ ಕೇರಳ ಮೂಲದ ಮಲಯಾಳಿಗಳು ನೆಲೆಸಿದ್ದು, ಇದರಲ್ಲಿ 30 ಕ್ಷೇತ್ರಗಳಲ್ಲಿ ಚುನಾವಣೆ ದೃಷ್ಟಿಯಿಂದ ನಿರ್ಣಾಯಕರಾಗಿದ್ದಾರೆ. ಮಿಷನ್ 150 ಪ್ಲಸ್ ಗುರಿಯ ಸಾಧನೆಗೆ ಮಲಯಾಳಿಗಳು ಬಿಜೆಪಿ ಬೆಂಬಲಿಸಲಿದ್ದಾರೆ’ ಎಂದರು.

ಯಡಿಯೂರಪ್ಪ ಅವರ ಸಹಕಾರ ದಿಂದ ಬಿಜೆಪಿ ಮಲಯಾಳಿ ಸೆಲ್ ಸ್ಥಾಪನೆಗೊಂಡಿದೆ. ರಾಜ್ಯದಲ್ಲಿ ನೆಲೆಸಿ ರುವ ಮಲಯಾಳಿಗಳ ಹಿತಾಸಕ್ತಿ ಕಾಯಲು ಬದ್ಧರಾಗಿರುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಕಾಂಗ್ರೆಸ್ ಮುಕ್ತ ಭಾರತ ನಿರ್ಮಿಸಬೇ ಕಾಗಿದೆ. ಜತೆಗೆ ಶಾಂತಿ ಸೌಹಾರ್ದತೆಯ ಜೀವನಕ್ಕಾಗಿ ಕಮ್ಯೂನಿಸ್ಟ್ ಮುಕ್ತ ಕೇರಳ ನಿರ್ಮಿಸುವ ಇನ್ನೊಂದು ಕನಸು ಮಲಯಾಳಿಗಳಲ್ಲಿದೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಕರ್ನಾಟಕ ಮಲಯಾಳಿ ಸೆಲ್ ಸದಸ್ಯ ಜಯಕುಮಾರ್ ಆರ್. ನಾಯರ್, ದಕ್ಷಿಣ ಕನ್ನಡ ಸಂಚಾಲಕ ವಿ.ಪಿ.ಕಷ್ಣರಾಜ, ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ವಿಧಾನಸಭೆ ಮಾಜಿ ಉಪಸ್ಪೀಕರ್ ಎನ್.ಯೋಗೀಶ್ ಭಟ್‌, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಕ್ಷೇತ್ರ ಅಧ್ಯಕ್ಷ ವೇದವ್ಯಾಸ ಕಾಮತ್, ಪಾಲಿಕೆ ಸದಸ್ಯೆ ರೂಪಾ ಡಿ.ಬಂಗೇರ, ಮುಖಂಡರಾದ ಸಂಜಯ ಪ್ರಭು, ಟಿ.ಕೆ.ರಾಜನ್, ಮೋ ಹನ್ ಟಿ.ವಿ., ಡಾ. ಸಂತೋಷ್ ಡಿ.ಶೆಣೈ, ಆದಿತ್ಯ ಉದಯ್, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪೂಜಾ ಇದ್ದರು. ಸಿ.ಎಸ್.ಪ್ರದೀಪ್ ಕುಮಾರ್ ಸ್ವಾಗತಿಸಿದರು. ಕಲ್ಯಾಣಿ ಬಾಲನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT