ನವದೆಹಲಿ: ಗಡಿ ಭದ್ರತಾ ಪಡೆಗಳು ಮತ್ತು ರಾಜ್ಯ ಪೊಲೀಸರ ಬಲವನ್ನು ಹೆಚ್ಚಿಸಲು ಬಲ್ಗೇರಿಯಾದಿಂದ 39 ಸಾವಿರ ಎಕೆ–47 ರೈಫಲ್ಗಳನ್ನು ಭಾರತ ಖರೀದಿಸುತ್ತಿದೆ.
ಇದರಲ್ಲಿ ಸುಮಾರು 7 ಸಾವಿರ ರೈಫಲ್ಗಳನ್ನು ಕಾಶ್ಮೀರ ಕಣಿವೆಯಲ್ಲಿ ಕಣ್ಗಾವಲು ಕಾಯುತ್ತಿರುವ ಸಿಆರ್ಪಿಎಫ್(ಕೇಂದ್ರ ಮೀಸಲು ಪೊಲೀಸ್ ಪಡೆ) ಯೋಧರಿಗೆ ನೀಡಲು ನಿರ್ಧರಿಸಲಾಗಿದೆ.
ಖರೀದಿಸುವ ಈ ಸಾವಿರಾರು ರೈಫಲ್ಗಳನ್ನು ದೇಶದ ನಾಲ್ಕು ಭದ್ರತಾ ಪಡೆಗಳ ಯೋಧರು ಮತ್ತು 22 ರಾಜ್ಯಗಳ ಪೊಲೀಸರಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಸಿಆರ್ಪಿಎಫ್ನ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಉಗ್ರರ ನುಸುಳುವಿಕೆ ಹೆಚ್ಚುತ್ತಿರುವ ಜಮ್ಮು–ಕಾಶ್ಮೀರ ಭಾಗದಲ್ಲಿ ಭದ್ರತೆಗಾಗಿ ಹೆಚ್ಚು ರೈಫಲ್ಗಳ ಪೂರೈಕೆಯಾಗಲಿದೆ. ದೇಶದ ನಕ್ಸಲ ಪೀಡಿತ ಪ್ರದೇಶಗಳಲ್ಲಿ ಪಹರೆ ಕಾಯುತ್ತಿರುವ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿನ ಬಂಡಾಯ ಹತ್ತಿಕ್ಕುತ್ತಿರುವ ಪಡೆಗಳಿಗೂ ಎಕೆ–47 ಸೇರಲಿವೆ.
‘ಆದಷ್ಟು ಬೇಗ ರೈಫಲ್ಗಳು ನಮ್ಮ ಕೈಸೇರಲಿವೆ. ಸಶಸ್ತ್ರ ಪಡೆಗೆ ಮತ್ತಷ್ಟು ಬಲ ತುಂಬಲು ಶೀಘ್ರದಲ್ಲಿ ನೇಮಕಾತಿ ನಡೆಸಬೇಕೆಂಬ ಪ್ರಸ್ತಾವನೆಯನ್ನು ರಕ್ಷಣಾ ಇಲಾಖೆಗೆ ಕಳುಹಿಸಿದ್ದೇವೆ’ ಎಂದು ಸಿಆರ್ಪಿಎಫ್ ಮಹಾನಿರ್ದೇಶಕ ಆರ್.ಆರ್.ಭಟ್ನಾಗರ್ ತಿಳಿಸಿದ್ದಾರೆ.
2017ರಲ್ಲಿ ಭಯೋತ್ಪಾದಕರು ಕಣಿವೆ ರಾಜ್ಯ ಜಮ್ಮು–ಕಾಶ್ಮೀರದಲ್ಲಿ 342 ಹಿಂಸಾಕೃತ್ಯಗಳನ್ನು ನಡೆಸಿದ್ದರು. ಅವುಗಳಲ್ಲಿ 80 ಯೋಧರು ಹುತಾತ್ಮರಾಗಿ, 40 ನಾಗರಿಕರು ಮೃತಪಟ್ಟಿದ್ದರು.