ಉಡುಪಿ: ದೇಶ ವಿರೋಧಿ ಘೋಷಣೆ ಕೂಗುವವರ ಮೇಲೆ ಕಠಿಣ ಕ್ರಮ ಜಾರಿಗೊಳಿಸಿದರೆ ಮಾತ್ರ ಅವರನ್ನು ನಿಯಂತ್ರಿಸಲು ಸಾಧ್ಯ ಎಂದು ಹಿಂದೂ ಜನಜಾಗೃತಿ ಸಮಿತಿಯ ಸದಸ್ಯ ವಿಶ್ವನಾಥ್ ನಾಯಕ್ ತಿಳಿಸಿದರು.
ಉಡುಪಿಯ ಅಜ್ಜರಕಾಡು ಹುತಾತ್ಮ ಸೈನಿಕ ಸ್ಮಾರಕದ ಬಳಿ ಶನಿವಾರ ರಾಷ್ಟ್ರೀಯ ಹಿಂದೂ ಅಂದೋಲನ ಸಮಿತಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಇತ್ತೀಚಿಗೆ ತಿರಂಗಾ ಯಾತ್ರೆ ಮೇಲೆ ಕಲ್ಲು ತೂರಾಟ ಮಾಡಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದನ್ನು ರಾಷ್ಟ್ರೀಯ ಹಿಂದೂ ಅಂದೋಲನ ಸಮಿತಿಯ ಖಂಡಿಸುತ್ತದೆ.
ಇದು ಅವರ ಸಮಾಜಘಾತಕ ಹಾಗೂ ದೇಶದ್ರೋಹಿ ಮಾನಸಿಕತೆಯನ್ನು ತೋರಿಸುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಪ್ರಕರಣದ ರೂವಾರಿಗಳನ್ನು ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.
ಹಿಂದೂ ಜನಜಾಗೃತಿ ಸಮಿತಿಯ ವಿಜಯ ಕುಮಾರ ಮಾತನಾಡಿ, ಸೈನಿಕರ ಮೇಲೆ ದಾಖಲಿಸಲಾದ ಅಪರಾಧವನ್ನು ಕೂಡಲೇ ಹಿಂಪಡೆದು, ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಹಿಂದೂ ಜನ ಜಾಗೃತಿ ಸಮಿತಿಯ ನವೀನ ಕುಮಾರ್, ರವಿ ಉದ್ಯಾವರ ಉಪಸ್ಥಿತರಿದ್ದರು.