ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ(69) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ನಡೆಯಲಿದೆ.
ಪುಟ್ಟಣ್ಣಯ್ಯ ಅವರ ಪುತ್ರಿಯರಾದ ಅಕ್ಷತಾ, ಸ್ಮಿತಾ ಅವರು ಕೆನಡಾದಿಂದ ಮಂಗಳವಾರ ರಾತ್ರಿ ಬರಲಿದ್ದಾರೆ. ಅಮೆರಿಕದಲ್ಲಿರುವ ತಂಗಿ ರೇಣುಕಾ ಅವರು ಬರಬೇಕಿದೆ. ಆದ್ದರಿಂದ, ಗುರುವಾರ ಮಧ್ಯಾಹ್ನ 1ಕ್ಕೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರವನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿದೆ. ಗುರುವಾರದವರೆಗೆ ಪಾರ್ಥಿವ ಶರೀರವನ್ನು ಶೈತ್ಯಾಗಾರದಲ್ಲಿ ಇಡಲಾಗುವುದು. ಗುರುವಾರ ಬೆಳಿಗ್ಗೆ ಹುಟ್ಟೂರು ಕ್ಯಾತನಹಳ್ಳಿಗೆ ತರಲಾಗುವುದು. ಅಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಕೆಲ ಹೊತ್ತು ಇರಿಸಲಾಗುವುದು. ಬಳಿಕ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
ಕುಟುಂಬ ಸದಸ್ಯರಿಗೆ ಸಿಎಂ ಸಾಂತ್ವನ; ಪಾಡವಪುರದಲ್ಲಿ ಪುಟ್ಟಣ್ಣಯ್ಯ ಪ್ರತಿಮೆ ಸ್ಥಾಪನೆ ಭರವಸೆ
ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಟ್ಟಣ್ಣಯ್ಯ ಅವರ ಪತ್ನಿ ಸುನಿತಾ ಪುಟ್ಟಣ್ಣಯ್ಯ ಹಾಗೂ ಪುತ್ರ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಸಕಲ ಸರ್ಕಾರಿ ಗೌರವಗಳೊಂದಿಗೆ ಪುಟ್ಟಣ್ಣಯ್ಯ ಅವರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಸಿಎಂ ಇದೇ ಸಂದರ್ಭದಲ್ಲಿ ಹೇಳಿದರು.
ರೈತರು ಹಾಗೂ ಸ್ಥಳೀಯರು ಒತ್ತಾಯ ಮಾಡಿದ ಬಳಿಕ, ಪಾಂಡವಪುರದಲ್ಲಿ ಪುಟ್ಟಣ್ಣಯ್ಯ ಅವರ ಪ್ರತಿಮೆ ಸ್ಥಾಪಿಸುವುದಾಗಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ಹೃದಯಾಘಾತದಿಂದ ನಿಧನರಾದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಮುಖ್ಯಮಂತ್ರಿ @siddaramaiah ಅವರು ಅಂತಿಮ ನಮನ ಸಲ್ಲಿಸಿದರು.
ಇಂದು ಬೆಳಿಗ್ಗೆ ಪಾಂಡವಪುರದ ಕೇತನಹಳ್ಳಿಗೆ ತೆರಳಿ ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಗೌರವ ಸಲ್ಲಿಸಿದರು. pic.twitter.com/Aiwi5R6ED2