ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲಿನಿಂದ ತಳ್ಳಿ ಕೊಲೆ: ‘ನಾನಂತು ಸಾಯುತ್ತೇನೆ, ಹಾಗಾಗಿ ನಿನ್ನನ್ನೂ ಕೊಲ್ಲುತ್ತೇನೆ’

Last Updated 19 ಫೆಬ್ರುವರಿ 2018, 12:18 IST
ಅಕ್ಷರ ಗಾತ್ರ

ಭೋಪಾಲ್‌: ಅಪರಿಚಿತ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನಿಂದ ಯುವಕನೊಬ್ಬನನ್ನು ತಳ್ಳಿ ಹತ್ಯೆ ಮಾಡಿರುವ ಘಟನೆ ಇಲ್ಲಿನ ಸುಖಿ ಸೆವಾನಿಯಾ ಪ್ರದೇಶದಲ್ಲಿ ನಡೆದಿದೆ. 

ಭಾನುವಾರ ಕಾಮಾಯನಿ ಎಕ್ಸ್‌ಪ್ರೆಸ್‌ ರೈಲಿನ ಸಾಮಾನ್ಯ ಬೋಗಿಯಲ್ಲಿ ಬಾಗಿಲ ಬಳಿ ಕುಳಿತು ಪ್ರಯಾಣಿಸುತ್ತಿದ್ದ ರಿತೇಶ್‌(23) ಮೃತ ದುರ್ದೈವಿ. ಅವರನ್ನು ರಾಜ್‌ಮಲ್‌ ಪಾಲ್‌ ಎಂಬಾತ ರೈಲಿನಿಂದ ತಳ್ಳಿದ್ದಾನೆ ಎಂದು ರೈಲ್ವೆ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

ಈ ಕುರಿತು ದೂರು ನೀಡಿರುವ ಮೃತ ಯುವಕನ ಸಂಬಂಧಿ ಹಾಗೂ ಸಹ ಪ್ರಯಾಣಿಕ ಸುಮಿತ್‌ ಸಿಂಗ್‌, ‘ನಾನು ಹೇಗಿದ್ದರೂ ಸಾಯುತ್ತೇನೆ. ಹಾಗಾಗಿ ನಿನ್ನನ್ನು ಕೊಲ್ಲುತ್ತೇನೆ’ ಎಂದು ಘಟನೆಗೂ ಮುನ್ನ ಪಾಲ್‌ ಹೇಳಿದ್ದಾಗಿ ತಿಳಿಸಿದ್ದಾರೆ. 

‘ಶೌಚಾಲಯದಿಂದ ಹೊರಬಂದ ಪಾಲ್‌ ಈ ರೀತಿಯ ಹೇಳಿಕೆ ನೀಡಿದ. ಏನಾಗುತ್ತಿದೆ ಎಂದು ಊಹಿಸುವ ಮುನ್ನವೇ ರಿತೇಶ್‌ನನ್ನು ತಳ್ಳಿದ’ ಎಂದೂ ದೂರಿನಲ್ಲಿ ಉಲ್ಲೇಸಿದ್ದಾರೆ.

‘ರಿತೇಶ್‌ ಹಾಗೂ ಆರೋಪಿ ‍ಪರಸ್ಪರ ಅಪರಿಚಿತರು. ಘಟನೆಗೆ ಮುನ್ನ ಇಬ್ಬರ ನಡುವೆ ಯಾವುದೇ ತರಹದ ಮನಸ್ತಾಪ, ಜಗಳ ಆಗಿರಲಿಲ್ಲ‌. ಭೋಪಾಲ್‌ನತ್ತ ಪ್ರಯಾಣಿಸುತ್ತಿದ್ದ ರಿತೇಶ್‌ ಹಾಗೂ ಆತನ ಸಂಬಂಧಿ ಸುಮಿತ್‌ ಸಿಂಗ್‌ ಬಾಗಿಲ ಬಳಿ ಕುಳಿತಿದ್ದರು. ಈ ವೇಳೆ ರಿತೇಶ್‌ನನ್ನು ಆರೋಪಿ ಪಾಲ್‌ ಚಲಿಸುತ್ತಿದ್ದ ರೈಲಿನಿಂದ ತಳ್ಳಿದ್ದಾನೆ’ ಎಂದು ಸುಖಿ ಸೆವಾನಿಯಾ ಪೊಲೀಸ್‌ ಠಾಣಾಧಿಕಾರಿ ಹೇಮಂತ್‌ ಶ್ರೀವಾಸ್ತವ್‌ ಮಾಹಿತಿ ನೀಡಿದ್ದಾರೆ.

ಸದ್ಯ ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ.

‘ಅಲಹಾಬಾದ್‌ನಲ್ಲಿ ತನ್ನ ತಾಯಿಯ ಅಂತ್ಯ ಸಂಸ್ಕಾರ ಮುಗಿಸಿದ್ದ ಪಾಲ್‌, ಭೋಪಾಲ್‌ಗೆ ವಾಪಸ್‌ ಆಗುತ್ತಿದ್ದ. ಅಲಹಾಬಾದ್‌ನಿಂದಲೇ ಪ್ರಯಾಣ ಆರಂಭಿಸಿದ್ದ ರಿತೇಶ್‌ ಹಾಗೂ ಸುಮಿತ್‌ ಮದುವೆ ಸಮಾರಂಭಕ್ಕೆ ಹಾಜರಾಗಲು ಭೋಪಾಲ್‌ಗೆ ಬರುತ್ತಿದ್ದರು’ ಎಂದು ಠಾಣೆಯ ಮತ್ತೊಬ್ಬ ಅಧಿಕಾರಿ ಮಹೇಂದ್ರ ಮಿಶ್ರ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT